ತುಮಕೂರು: ಆಧುನಿಕ ಭಾರತೀಯ ರಂಗ ಸೌಂದರ್ಯ ಸಂಶೋಧನಾ ಸಾಂಸ್ಕೃತಿಕ ಸಮುಚ್ಚಯದ ಶಂಕು ಸ್ಥಾಪನಾ ಸಮಾರಂಭ ಬುಧವಾರ ಹಲವು ಜಾನಪದ ಕಲಾವಿದರ ಪ್ರದರ್ಶನದ ನಡುವೆ ನೆರವೇರಿತು.
ಸಂಸದ ಜಿ.ಎಸ್.ಬಸವರಾಜ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ ಶುಭ ಕೋರಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಸ್.ಶಿವಣ್ಣ, ರಾಜಕಾರಣಿ ಹಾಗೂ ಅಧಿಕಾರಿಗಳಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಎಚ್ಚರ ಮೂಡಿಸುವ ಕಾರ್ಯವನ್ನು ರಂಗ ಕಲಾವಿದರು ನಿರ್ವಹಿಸುವಲ್ಲಿ ವಿಫಲ ರಾಗುತ್ತಿದ್ದಾರೆ ಎಂದರು.
ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ ಅವರಂಥ ಹಿರಿಯ ಕಲಾವಿದರು ಸಕ್ರಿಯರಾಗಿದ್ದ ಕಾಲದಲ್ಲಿ ರಾಜಕಾರಣಿಗಳನ್ನು ರಂಗಭೂಮಿಯಲ್ಲಿ ಲೇವಡಿ ಮಾಡುತ್ತಿದ್ದರು. ಸಾರ್ವಜನಿಕ ಬದುಕಿನಲ್ಲಿ ಎಡವಲು ಕಾರಣವಾಗುವ ನಮ್ಮ ಅತ್ಯಂತ ಖಾಸಗಿ ಬದುಕಿನ ವರ್ತನೆಗಳನ್ನೂ ರಂಗಸ್ಥಳದಲ್ಲಿ ಸಾರ್ವಜನಿಕವಾಗಿ ವಿಮರ್ಶೆಗೆ ಒಳಪಡಿಸುತ್ತಿದ್ದರು ಎಂದರು.
`ನಾನು ಹತ್ತಾರು ವರ್ಷದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನ ತಪ್ಪುಗಳನ್ನೇ ಒಂದು ಪಟ್ಟಿ ಮಾಡಿ ನಾಟಕ ಪ್ರದರ್ಶಿಸಿ. ಜನರೊಂದಿಗೆ ನಾನು ಕುಳಿತು ನೋಡುತ್ತೇನೆ. ಬುದ್ಧಿ ಕಲಿತುಕೊಳ್ಳುತ್ತೇನೆ. ಮುಂದಿನ ಮಾರ್ಚ್ವರೆಗೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೆ `ರಂಗ ಸೌಂದರ್ಯ~ಕ್ಕೆ ಶಾಸಕರ ನಿಧಿಯಿಂದ ರೂ. 5 ಲಕ್ಷ ದೇಣಿಗೆ ಕೊಡುತ್ತೇನೆ~ ಎಂದರು.
ಡಿವೈಎಸ್ಪಿ ವಿಜಯ್ಕುಮಾರ್, ನಗರಸಭೆ ಅಧ್ಯಕ್ಷೆ ಯಶೋಧಾ ಗಂಗಪ್ಪ, ನಗರಸಭೆ ಆಯುಕ್ತೆ ಎಂ.ವಿ.ಸಾವಿತ್ರಿ, ನಗರಸಭೆ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿದರು.
ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಪ್ರಾಸ್ತಾವಿಕ ಮಾತನಾಡಿದರು. ಕಟ್ಟಡದ ಒಳಾವರಣ ವಿನ್ಯಾಸ ಮಾಡಿದ ವಿ.ರಾಮಮೂರ್ತಿ ಅವರನ್ನು ಹರಪನಹಳ್ಳಿಯ `ಸಮಸ್ತರು~ ತಂಡದ ವತಿಯಿಂದ ಸನ್ಮಾನಿಸಲಾಯಿತು.