ಮಹದೇವಪುರ: ಹಗದೂರು ವಾರ್ಡ್ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ರಾಜಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾದ ಅಕ್ರಮ ತಡೆಗೋಡೆಯನ್ನು ಪಾಲಿಕೆಯ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದರು.
ಸುಮಾರು 33 ಅಡಿಗಳಷ್ಟು ಅಗಲ ಹಾಗೂ 500 ಅಡಿಗಳಿಗಿಂತಲೂ ಹೆಚ್ಚು ಉದ್ದವಿದ್ದ ರಾಜಕಾಲುವೆಗೆ ಮಣ್ಣುಮುಚ್ಚಿ, ಅಡ್ಡ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಪಾಲಿಕೆಯ ಹಗದೂರು ವಾರ್ಡ್ನ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಶಿವಲಿಂಗೆಗೌಡ ಮತ್ತು ಸಹಾಯಕ ಎಂಜನಿಯರ್ ನಾರಾಯಣಸ್ವಾಮಿ ಪರಿಶೀಲನೆ ನಡೆಸಿ ತಡೆಗೋಡೆಯನ್ನು ತೆರವುಗೊಳಿಸಿದರು.