ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾಂಗ್ರೆಸ್ ಸದಸ್ಯ ಎಸ್. ನಟರಾಜ್ ಅವರ ಹತ್ಯೆಯ ಹಿಂದೆ `ರಾಜಕೀಯ ಕೈವಾಡ ಇದೆ~ ಎಂದು ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ನಟರಾಜ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಮುರುಗನ್ ಮತ್ತು ಸಹಚರರನ್ನು ಬಂಧಿಸಲಾಗಿದೆ. ಆದರೆ ಮುರುಗನ್ ಒಬ್ಬರಿಂದಲೇ ಈ ಹತ್ಯೆ ಸಂಭವಿಸಿಲ್ಲ. ಇದರ ಹಿಂದೆ ರಾಜಕೀಯ ಕೈವಾಡ ಇದೆ~ ಎಂದು ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗುತ್ತಿರುವ ಕುರಿತು ಹಲವರಲ್ಲಿ ಅಸೂಯೆ ಇದೆ. ಮುರುಗನ್ ಬಂಧನದಿಂದ ಎಲ್ಲವೂ ಮುಗಿದಿಲ್ಲ. 25 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆ ಮಾಡಿಸುವಂಥ ಆರ್ಥಿಕ ಸಾಮರ್ಥ್ಯ ಮುರುಗನ್ಗೆ ಇಲ್ಲ ಎಂದರು.
ಈ ಹತ್ಯೆ ಹಿಂದೆ ಬಿಜೆಪಿ ಅಥವಾ ಜೆಡಿಎಸ್ ಕೈವಾಡ ಇಲ್ಲ. ಬಿಬಿಎಂಪಿಯ ಮಾಜಿ ಸದಸ್ಯ ಗೋವಿಂದರಾಜು ಅವರ ಹತ್ಯೆ ಯತ್ನದ ಹಿಂದಿರುವ ಶಕ್ತಿಗಳೇ ನಟರಾಜ್ ಹತ್ಯೆಯ ಹಿಂದಿವೆ. ಈ ಕುರಿತು ಸೂಕ್ತ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಈ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಗೃಹ ಸಚಿವ ಆರ್. ಅಶೋಕ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.