ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ತಿರುವು ಪಡೆದ ಕ್ರೀಡಾಂಗಣ ಹೋರಾಟ

Last Updated 20 ಅಕ್ಟೋಬರ್ 2012, 4:25 IST
ಅಕ್ಷರ ಗಾತ್ರ

ಸಿಂದಗಿ: ಸ್ಥಳೀಯ ವಿದ್ಯಾನಗರ ಜೋಪಡಿಪಟ್ಟಿ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ ಬೇಡ, ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಮಿನಿವಿಧಾನಸೌಧ ಬಳಿ ರಸ್ತೆಯಲ್ಲಿ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿತು.

ಈ ಹೋರಾಟದ ಲಾಭ ಪಡೆಯಲು ರಾಜಕೀಯ ಪಕ್ಷಗಳ ಕಸರತ್ತು ಕೂಡ ಪ್ರಾರಂಭಗೊಂಡಿತು. ಇಂದು ಕಾಂಗ್ರೆಸ್ ಪಕ್ಷ ಕಸರತ್ತಿಗೆ ನಾಂದಿ ಹಾಡಿತು.ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಶರಣಪ್ಪ ಸುಣಗಾರ ತನ್ನ ಕಾಂಗ್ರೆಸ್ ದಂಡಿನೊಂದಿಗೆ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಮತದಾರರ ಓಲೈಕೆ ಮಾಡಲು ಪ್ರಯತ್ನಿಸಿದರು.

ಇದೇ ವೇದಿಕೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಂ.ಎನ್.ಕಿರಣರಾಜ್ ಮಾತ ನಾಡಿ, ರಾಜಕಾರಣಿಗಳು ಕ್ರೀಡಾಂಗಣ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಎಲ್ಲರೂ ಒಮ್ಮನ್ನಸ್ಸಿನಿಂದ ಅಲ್ಲಿನ ಗುಡಿಸಲು ವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅದರಂತೆ ಅಗತ್ಯವಾಗಿ ರುವ ಕ್ರೀಡಾಂಗಣವೂ ನಿರ್ಮಾಣಗೊಳ್ಳ ಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಧುರೀ ಣರಾದ ಎಂ.ಎ.ಖತೀಬ, ಗೊಲ್ಲಾಳಪ್ಪ ಗೌಡ ಪಾಟೀಲ ಮಾಗಣಗೇರಿ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಮಹಾಂತಗೌಡ ಬಿರಾದಾರ, ಅಮೀರ್ ಇಂಡಿಕರ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಜನವಾದಿ ಮಹಿಳಾ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಸುರೇಖಾ ರಜಪೂತ, ಡಿವೈಎಫ್‌ವೈ ತಾಲ್ಲೂಕು ಸಂಚಾಲಕ ಅಬ್ದುಲರಜಾಕ ಸಿಂದಗಿಕರ, ಬಾಬು ಕೇಸರಿ, ನಾನಾಗೌಡ ಪಾಟೀಲ, ಮಹಾಂತೇಶ ನಡುವಿನಕೇರಿ ಮುಂತಾದವರು ಉಪಸ್ಥಿತರಿದ್ದರು,ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸರಸ್ವತಿ ಮಠ ಸತ್ಯಾಗ್ರಹಕ್ಕೆ ಬೆಂಬಲಿಸಿದರು.

ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಗುಡಿಸಲು ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸುವ ವ್ಯವಸ್ಥೆ ಮಾಡುವುದರ ಜೊತೆಗೆ ಅವರಿಗೆ ಮೂಲ ಸೌಕರ್ಯ ಗಳನ್ನು ಒದಗಿಸಿಕೊಟ್ಟು ನೆನೆಗುದಿಗೆ ಬಿದ್ದಿರುವ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಕಾರ್ಯ ಪ್ರಾರಂಭಿಸುವಂತೆ ಜಿಲ್ಲಾಡಳಿತಕ್ಕೆ ಕ್ರೀಡಾಂಗಣ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಕುರಿತು ಕ್ರೀಡಾಂಗಣ ಹೋರಾಟ ಸಮಿತಿ ಪದಾಧಿಕಾರಿಗಳಾದ ಡಾ.ಗಿರೀಶ ಕುಲಕರ್ಣಿ, ಅಶೋಕ ಮನಗೂಳಿ, ಮಲ್ಲು ಘತ್ತರಗಿ,  ಸಿದ್ದಣ್ಣ ಚೌಧರಿ, ಪ್ರಕಾಶ ಹಿರೇಕುರುಬರ,ಎಸ್.ಎಸ್. ಮಲ್ಲೇದ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕ್ರೀಡಾಂಗಣ ನಿರ್ಮಾಣ ಕುರಿತು ಶಾಸಕರು, ವಿಧಾನಪರಿಷತ್ ಸದಸ್ಯರ ನೇತೃತ್ವದಲ್ಲಿ ಸರ್ವ ಪಕ್ಷಗಳ, ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಗುಡಿಸಲು ವಾಸಿಗಳನ್ನೊಳಗೊಂಡು ಮೂರು ಬಾರಿ ಸಭೆ ನಡೆದಿದೆ. ಸಭೆಯಲ್ಲಿ ಕ್ರೀಡಾಂಗಣ ಜಾಗೆಯಲ್ಲಿ ವಾಸವಾಗಿರುವ 99 ಗುಡಿಸಲು ವಾಸಿಗಳಿಗೆ ಬೇರೆಡೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು.

ಆದರೆ ಈಗ ಗುಡಿಸಲುವಾಸಿಗಳು ನಡೆಸುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಕೆಲವರು ಕ್ರೀಡಾಂಗಣ ಹೋರಾಟ ಸಮಿತಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು ಎಂದು ಹೋರಾಟ ಸಮಿತಿ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT