ಗಂಗಾವತಿ: ಸಮಾಜದಲ್ಲಿ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿಯು ಅತ್ಯಂತ ಪಾವಿತ್ರ್ಯವಾದದ್ದು. ಆದ್ದರಿಂದ ಶಿಕ್ಷಕರು ತಮ್ಮ ವೃತ್ತಿ ಘನತೆ, ಗಾಂಭೀರ್ಯವನ್ನು ಅರಿತು ಕೆಲಸ ನಿರ್ವಹಿಸಬೇಕಿದೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಪಂಚಾಯಿತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿನಾಕಾರಣ ಶಿಕ್ಷಕರು ಕಚ್ಚಾಡಿಕೊಳ್ಳುವುದು, ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ಸಂಘಟನೆ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಓಡಾಡುವುದನ್ನು ನಿಲ್ಲಿಸಿ ಪ್ರಾಮಾಣಿಕತೆಯಿಂದ ಸಮಾಜದ ಅಭಿವೃದ್ಧಿಗೆ ಮಕ್ಕಳನ್ನು ಸಿದ್ಧಗೊಳಿಸಬೇಕಾದ ಸವಾಲು ಶಿಕ್ಷಕರ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಸ್ಥಿತಿಯಲ್ಲಿ ಸಮಾಜವು ಶಿಕ್ಷಕರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಹೀಗಾಗಿ ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಹೇಳಿದರು.
ಈ ಹಿಂದೆ ಸುಶಿಕ್ಷಿತ ಸಮಾಜ ನಿರ್ಮಾಣದ ಗುರಿಯೊಂದೆ ಶಿಕ್ಷಕರ ಮೇಲಿತ್ತು. ಇದೀಗ ಶಿಕ್ಷಣದ ಜೊತೆಗೆ ಮೌಲ್ಯಯುತ ಯುವ ಜನಾಂಗವನ್ನು ರೂಪಿಸಿ ಸ್ವಾಸ್ಥ್ಯ ಸಮಾಜ ಕಟ್ಟಬೇಕಾದ ಹೆಚ್ಚುವರಿ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ವೈಚಾರಿಕತೆ ಮೈಗೂಡಿಸಿಕೊಂಡು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲು ಶಿಕ್ಷಕರ ದಿನಾಚರಣೆಯಂತ ಸಮಾರಂಭಕ್ಕಿಂತ ಮಿಗಿಲಾದ ಮತ್ತೊಂದು ವೇದಿಕೆ ಇಲ್ಲ ಎಂದ ಅವರು, ಪ್ರಾಮಾಣಿಕ ವೃತ್ತಿಗೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರು.
ಎ.ಟಿ. ಕಲ್ಮಠ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟ್ರಾವ್, ವಿಜಯಲಕ್ಷ್ಮಿ, ಹೇಮಾವತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್.ಮಠ, ಶಿಕ್ಷಕರ ಸಂಘಟನೆಯ ಬಸವರಾಜ ಪಾಟೀಲ್, ರೆಡ್ಡಿ ರಾಜೇಶ್ವರ, ಸಿದ್ಧಾರೂಢ, ನೀಲವೇಣಿ, ಆರ್.ಟಿ. ನಾಯಕ, ಹುಂಬಣ್ಣ ಇತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.