ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವ್ಯಂಗ್ಯಚಿತ್ರ ಹಾಗೆಂದರೇನು?

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ನಿಷ್ಠಾವಂತ ರಾಜಕಾರಣಿ. ಇವತ್ತಿನ ರಾಜಕೀಯದಲ್ಲಿ ಈತ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಆಸಾಮಿ. ರಾಜಕೀಯ ಪಕ್ಷವೊಂದರ ಹುರಿಯಾಳು ಆ ಪಕ್ಷಕ್ಕೋ ಅದರ ನಾಯಕನಿಗೋ ನಿಷ್ಠನಾಗಿರಬೇಕಾದ್ದು ಸಹಜವಷ್ಟೆ.

(ಪಕ್ಷಗಳ ಸಂಖ್ಯೆ ಬೆಳೆದಂತೆ, ವಿವಿಧ ಬಣಗಳ ರಾಜಕಾರಣಿಗಳು ಹೆಚ್ಚಿದಂತೆ ಈ ನಿಷ್ಠೆಯೆನ್ನುವುದು ಸ್ವಹಿತಕ್ಕೆ ಬಾಧಕವಾಗದಿದ್ದಾಗ ಮಾತ್ರ ಕಂಡುಬರುವುದುಂಟು). ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ, ಸ್ವಲ್ಪ ಕಾಲ ಸಂಸದರೂ ಆಗಿದ್ದ, ಕೆಂಗಲ್ ಹನುಮಂತಯ್ಯನವರು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಒಮ್ಮೆ ತಮ್ಮ ನಿಷ್ಠೆ ಇಂದಿರಾ ಗಾಂಧಿಯವರಿಗೆ ಮಾತ್ರ ಎಂದಿದ್ದರು.
 
ಮರುದಿನ `ಪ್ರಜಾವಾಣಿ~ಯಲ್ಲಿ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಬಿ.ವಿ.ರಾಮಮೂರ್ತಿಯವರ ಒಂದು ಅರ್ಥಪೂರ್ಣ ವ್ಯಂಗ್ಯಚಿತ್ರ ಪ್ರಕಟವಾಯಿತು. ಆ ಚಿತ್ರದಲ್ಲಿ ಹನುಮಂತಯ್ಯನವರು ತಮ್ಮಳಗೇ ಪ್ರತಿಷ್ಠಾಪಿಸಿಕೊಂಡಿದ್ದ ಇಂದಿರಾ ಗಾಂಧಿಯನ್ನು ತಮ್ಮ ಎದೆ ಬಗೆದು ತೋರಿಸಿದ್ದರು! ಹೀಗೆ ರಾಮಾಯಣದಲ್ಲಿ ಹನುಮಂತ ತನ್ನ ಎದೆಬಗೆದು ಶ್ರೀರಾಮನನ್ನು ತೋರಿಸಿದ ಪ್ರಸಂಗ ವ್ಯಂಗ್ಯಚಿತ್ರಕಾರನ ಪ್ರತಿಭೆಯಿಂದ ಸಮಕಾಲೀನ ವಿದ್ಯಮಾನಕ್ಕೊಂದು ಹೊಸ ರೂಪಕವಾಯಿತು.

ವ್ಯಂಗ್ಯಚಿತ್ರಕಾರನ ಪ್ರತಿಭೆಗೆ ಗ್ರಾಸ ಒದಗಿಸುವವರು ನಮ್ಮ ರಾಜಕೀಯ ಹುರಿಯಾಳುಗಳು, ಅಧಿಕಾರಿಗಳು, ಭಾಷಣಕಾರರು. ಯಾವುದೇ ಪತ್ರಿಕೆಯನ್ನು ತೆರೆದು ನೋಡಿ, ನಿಮಗೆ ದೋಣಿಯೊಂದನ್ನು ಅಲ್ಲಾಡಿಸುತ್ತಿರುವ, ಅಡ್ಡಗೋಡೆಯ ಮೇಲೆ ಕುಳಿತಿರುವ, ದೊಣ್ಣೆ ಬೀಸುತ್ತಿರುವ, ಮಣ್ಣೆರೆಚುತ್ತಿರುವ ಯಾರಾದರೊಬ್ಬರು ಕಾಣಿಸದೆ ಇರುವುದಿಲ್ಲ.

ವ್ಯಂಗ್ಯಚಿತ್ರವೆನ್ನುವುದು ದೂರುವ, ಅಸಮ್ಮತಿ ತೋರುವ ಕಲೆಯಾದ್ದರಿಂದ ಅದು ಇಂಥವರ ದೌರ್ಬಲ್ಯವನ್ನು, ಅಹಂಕಾರವನ್ನು, ಆಸೆಬುರುಕತನವನ್ನು, ಆತ್ಮವಂಚನೆಯನ್ನು, ಆಷಾಡಭೂತಿತನವನ್ನು ಚುಚ್ಚುತ್ತದೆ. ಈ ಗುಣಾವಗುಣಗಳೆಲ್ಲ ಬಹುಮಟ್ಟಿಗೆ ಕಾಣುವುದು ರಾಜಕಾರಣಿಗಳಲ್ಲಿ ಮತ್ತು ಸಾರ್ವಜನಿಕ ವ್ಯಕ್ತಿಗಳಲ್ಲಿ.

ಒಂದು ದೇಶದ ಜಯಾಪಜಯ, ಅದರ ಪ್ರಜೆಗಳ ನೋವು ನಲಿವು ಇಂಥವರ ಕೈಯಲ್ಲೇ ಇರುತ್ತವೆಯಲ್ಲವೆ? ಹಾಗಾಗಿ ಈ ಜನರ ಅವಿವೇಕ, ಇವರು ಇಟ್ಟುಕೊಂಡಿರುವ ಆದರ್ಶ, ನೀಡುವ ಆದ್ಯತೆ, ಎಸಗುವ ಪ್ರಮಾದ, ಇವೆಲ್ಲವೂ ಜನಸಾಮಾನ್ಯರ ಬದುಕಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. 

ವ್ಯಂಗ್ಯಚಿತ್ರಕಾರನ ಉದ್ದೇಶ ಇಂಥ ನಾಯಕರನ್ನು ಅಣಕಿಸುವ, ಗೇಲಿಮಾಡುವ, ಚುಚ್ಚುವ, ಟೀಕಿಸುವ ಮೂಲಕ ಪರೋಕ್ಷವಾಗಿ ಜನಸಾಮಾನ್ಯರ ಬವಣೆಯನ್ನು ಎತ್ತಿತೋರಿಸುವುದು.
ಇತಿಹಾಸದ ಬಗೆಗಾಗಲೀ ರಾಜಕೀಯದ ಬಗೆಗಾಗಲೀ ಬರೆಯುವಾಗ ಅಥವಾ ಯೋಚಿಸುವಾಗ ವ್ಯಕ್ತಿಗಳು, ಅವರ ಆಶೋತ್ತರಗಳು, ಅವರ ಸಂಕಷ್ಟಗಳು ನಮ್ಮ ಪಾಲಿಗೆ ಅಮೂರ್ತವಾಗಿಬಿಡುವುದುಂಟು.

ವ್ಯಂಗ್ಯಚಿತ್ರಕಾರನಾದವನು ಈ ಅಮೂರ್ತತೆಯ ಮೇಲೆ ಬೆಳಕು ಚೆಲ್ಲಿ ಅದು ನಿಜಕ್ಕೂ ಎಂಥ ಘನಘೋರ ವಾಸ್ತವವಾಗಿದೆಯೆಂದು ನಮಗೆ ಮನದಟ್ಟುಮಾಡಿಕೊಡುತ್ತಾನೆ. ಈ ಕೆಲಸ ಸಾಧಿಸುವುದಕ್ಕಾಗಿಯೇ ಅವನ ಬತ್ತಳಿಕೆಯಲ್ಲಿ ಬಗೆಬಗೆಯ ಅಸ್ತ್ರಗಳುಂಟು. 
ವ್ಯಂಗ್ಯಚಿತ್ರಕಾರನಾದವನು ಸಮಕಾಲೀನ ರಾಜಕೀಯ, ಸಾಮಾಜಿಕ ವಿದ್ಯಮಾನಗಳನ್ನು ಚಿತ್ರಿಸುವುದಕ್ಕಾಗಿ ತನ್ನದೇ ಆದ ಉಪಮೆಗಳನ್ನು ಅಥವಾ ಸಾದೃಶ್ಯಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.

ಉದಾಹರಣೆಗೆ 1754ರಲ್ಲಿ ಪ್ರಕಟವಾದ ಈ ವ್ಯಂಗ್ಯಚಿತ್ರವನ್ನು ನೋಡಿ (ಚಿತ್ರ 1). ಇದನ್ನು ರಚಿಸಿದವನು ಬೆಂಜಮಿನ್ ಫ್ರಾಂಕ್ಲಿನ್. ಪೆನ್ಸಿಲ್ವೇನಿಯಾವನ್ನು ಪ್ರತಿನಿಧಿಸುತ್ತಿದ್ದ ಈತ ಅಮೆರಿಕದ ಎಲ್ಲ ವಸಾಹತುಗಳೂ ಒಂದಾಗಬೇಕೆಂದು ಆಶಿಸಿದವನು. ಸಂಜೆಯಾಗುವ ಮುಂಚೆ ಹೋಳುಹೋಳಾದ ಹಾವನ್ನು ಒಂದುಗೂಡಿಸಿದರೆ ಅದಕ್ಕೆ ಜೀವ ಬರುತ್ತದೆಯೆನ್ನುವುದು ಒಂದು ಜನಪ್ರಿಯ ಮೂಢನಂಬಿಕೆ.
 
ಫ್ರಾಂಕ್ಲಿನ್ ಆ ಮೂಢನಂಬಿಕೆಯನ್ನೇ ಒಂದು ಉಪಮೆಯಾಗಿ ಬಳಸಿಕೊಳ್ಳುವ ಮೂಲಕ ತನ್ನ ಕಾಲದ ವಸ್ತುಸ್ಥಿತಿಗೆ ಕನ್ನಡಿ ಹಿಡಿದ; ಜೊತೆಗೆ ಅದೊಂದು ಹಾವಿನ ಪ್ರತಿಮೆಯ ಮೂಲಕ ಅಮೆರಿಕದ ಆ ಕಾಲದ ರಾಜಕೀಯ ಸ್ಥಿತ್ಯಂತರಗಳನ್ನು ತೀರ ಸಂಗ್ರಹವಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ.

ರಾಜಕೀಯ ಸನ್ನಿವೇಶಗಳನ್ನು ಪ್ರತಿನಿಧಿಸುವವರು ಚುನಾಯಿತ ಜನಪ್ರತಿನಿಧಿಗಳಷ್ಟೆ. ಅವರ ನಿಲುವುಗಳನ್ನು, ನಿರ್ಧಾರಗಳನ್ನು ಸಾಂಕೇತಿಕವಾಗಿ ಪಡಿಮೂಡಿಸಬೇಕೆಂದಾಗ ನಮ್ಮ ವ್ಯಂಗ್ಯಚಿತ್ರಕಾರರ ನೆರವಿಗೆ ಬರುವುದು ಪ್ರಾಣಿ ಪ್ರತಿಮೆ. ಹಾಗೆ ನೋಡಿದರೆ ಪ್ರತಿಯೊಬ್ಬ ಸಮರ್ಥ ವ್ಯಂಗ್ಯಚಿತ್ರಕಾರನಲ್ಲೂ ಒಂದು ರಾಜಕೀಯ ಮೃಗಾಲಯವೇ ಇರುತ್ತದೆ. 

ಹದಿನೆಂಟನೆಯ ಶತಮಾನಕ್ಕೆ ಮೊದಲು ವ್ಯಂಗ್ಯಚಿತ್ರಕಾರನೊಬ್ಬ ತನ್ನ ಸಂವಹನವನ್ನು ಸರಾಗಗೊಳಿಸುವುದಕ್ಕಾಗಿ ತನ್ನದೇ ಪ್ರಾಣಿ-ಪ್ರತೀಕವೊಂದನ್ನು ಬಳಸಿಕೊಂಡದ್ದು ತೀರ ಅಪರೂಪ. ಆದರೆ ಇಂದು ಜೋಸೆಫ್ ನಾಸ್ಟ್ 1874ರಲ್ಲಿ ಚಿತ್ರಿಸಿದ ಆನೆ ರಿಪಬ್ಲಿಕನ್ ಪಕ್ಷದ ಚಿನ್ಹೆಯೆಂದು ಅಮೆರಿಕದವರೆಲ್ಲರಿಗೂ ಗೊತ್ತು. ಅದೇ ರೀತಿ ಇಂದು ಪಾರಿವಾಳ ಶಾಂತಿಯ ಸಂಕೇತವಾಗಿದೆಯೆಂದು ತಿಳಿಯದವರು ವಿರಳ.

ಈಸೋಪನ ನೀತಿ ಕತೆಗಳಲ್ಲಿ, ಕಥಾ ಸರಿತ್ಸಾಗರದಲ್ಲಿ, ಮಾರೀಚ, ಜಟಾಯು, ಹನುಮಂತ ಮೊದಲಾದ ಪಾತ್ರಗಳಿರುವ ರಾಮಾಯಣದಲ್ಲಿ, ದೇವರ ಅವತಾರಗಳಲ್ಲಿ, ಜಾನಪದ ಕತೆಗಳಲ್ಲಿ ಪ್ರಾಣಿ-ಪಕ್ಷಿಗಳೇ ರಾರಾಜಿಸುತ್ತವೆ.

ಸಾಹಿತ್ಯ ಸೃಷ್ಟಿಸಿರುವ ಇಂಥ ಕಥಾರೂಪಕಗಳು ಎಲ್ಲ ಭಾಷೆಗಳಲ್ಲೂ ಸಮಾನವಾಗಿರುತ್ತವೆ. ನಾವು ಒಬ್ಬನನ್ನು ಗುಳ್ಳೇನರಿ ಎಂದರೆ ಇನ್ನೊಬ್ಬನನ್ನು ಕತ್ತೆ ಎನ್ನುತ್ತೇವಲ್ಲವೆ? ನಯವಂಚಕನೊಬ್ಬನಿಗೆ ನಾವು ಕೊಡುವ ಬಿರುದು `ಗೋಮುಖವ್ಯಾಘ್ರ~.

ವಿನ್ಸ್‌ಟನ್ ಚರ್ಚಿಲ್ ತನ್ನ ರಾಜಕೀಯ ಪ್ರತಿಸ್ಪರ್ಧಿಯೊಬ್ಬನನ್ನು  `ಕುರಿಯ ತೊಗಲಲ್ಲಿರುವ ಕುರಿ~ ಎಂದು ಕರೆದದ್ದುಂಟು. ಅಂದರೆ ಸಾರ್ವತ್ರಿಕವಾಗಿ ತಿಳಿದಿರುವ ಈ ಅರ್ಥಗಳನ್ನು ಸಾಂಪ್ರದಾಯಿಕ ಪ್ರಾಣಿಕತೆಗಳ ಪ್ರತೀಕಗಳೊಡನೆ ಹೊಂದಿಸುವುದರಲ್ಲೇ ವ್ಯಂಗ್ಯಚಿತ್ರಕಾರನ ಪ್ರತಿಭೆಯಿದೆ.

ಅವನಿಗೆ ರಾಷ್ಟ್ರ ಲಾಂಛನಗಳೆನಿಸಿದ ಬ್ರಿಟನ್ನಿನ ಸಿಂಹ, ಅಮೆರಿಕದ ಹದ್ದು, ರಷ್ಯಾದ ಕರಡಿ, ಭಾರತದ ನವಿಲು ಆಯಾ ರಾಷ್ಟ್ರಗಳ ಧ್ಯೇಯಧೋರಣೆಗಳನ್ನು ಪ್ರಕಟಪಡಿಸುವ ಸಂಕೇತಗಳಾಗುತ್ತವೆ.  ವ್ಯಂಗ್ಯಚಿತ್ರಕಾರ ಇಂಥ ಸಂಕೇತಗಳನ್ನು ಬಳಸಿಕೊಂಡು ನಮ್ಮ ಕಾಲದ ವಸ್ತುಸ್ಥಿತಿಯನ್ನು ತನ್ನದೇ ವಿಶಿಷ್ಟ ರೀತಿಯಲ್ಲಿ ಧ್ವನಿಸುತ್ತಾನೆ.

ಇಂದು ಮನುಷ್ಯರನ್ನು ಪ್ರಾಣಿಗಳಂತೆ, ಪ್ರಾಣಿಗಳನ್ನು ಮನುಷ್ಯರಂತೆ ಲೀಲಾಜಾಲವಾಗಿ ಚಿತ್ರಿಸುವ ವ್ಯಂಗ್ಯಚಿತ್ರಕಾರನಿಗೆ ಬಹು ಹಿಂದೆಯೇ ಮನುಷ್ಯನ ಮುಖಕ್ಕೂ ಪ್ರಾಣಿಯ ಮೋರೆಗೂ ಎಂಥ ಹೋಲಿಕೆಯಿದೆಯೆಂದು ಗೊತ್ತಿತ್ತು. ನಿದರ್ಶನಕ್ಕಾಗಿ 1586ರಷ್ಟು ಹಿಂದೆ ದೆಲ್ಲಾ ಪೋರ್ತಾ ಎಂಬ ಕಲಾವಿದ ಬಿಡಿಸಿರುವ ಈ ಚಿತ್ರವನ್ನು ನೋಡಿ (ಚಿತ್ರ 1-ಎ). 

ಬ್ರಿಟಿಷ್ ವ್ಯಂಗ್ಯಚಿತ್ರಕಾರ ರೋನಾಲ್ಡ್ ಸಾರ್ಲ್ ಒಮ್ಮೆ `ಫಾರ್ ಎ ಗುಡ್ ಕಾರ್ಟೂನಿಸ್ಟ್, ಅನ್ ಎಲಿಫೆಂಟ್ ಈಸ್ ಓನ್ಲಿ ಎ ಪಿಗ್ ವಿತ್ ಅನ್ ಎಲಾಂಗೇಟೆಡ್ ನೋಸ್~ (ಒಳ್ಳೆಯ ವ್ಯಂಗ್ಯಚಿತ್ರಕಾರನಿಗೆ ಆನೆಯೆನ್ನುವುದು ತೀರ ಉದ್ದ ಮೂಗಿರುವ ಒಂದು ಹಂದಿಯಷ್ಟೆ) ಎಂದ. ಗಾಂಧೀಜಿ ಒಬ್ಬ ಮನುಷ್ಯನೇ, ಒಂದು ವಿಚಾರವೇ ಎಂದು ತಿಳಿಯಲಾರದ ರಾಜಕಾರಣಿಗಳನ್ನು ಚಿತ್ರಿಸಬೇಕೆಂದಾಗ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂಗೆ ಹೊಳೆದ ಪ್ರಾಣಿ ಆನೆ. (ಚಿತ್ರ 2). 

ಸಾದೃಶ್ಯಗಳ ವಿಷಯ ಬಂದಾಗ ವ್ಯಂಗ್ಯಚಿತ್ರಕಾರರು ಗಾದೆಗಳಿಗೆ ನೀಡುವ ಮಹತ್ವವನ್ನು ಕಡೆಗಣಿಸಲಾಗದು. `ಅತ್ತೆ ಸೊಸೆ ಜಗಳದಲ್ಲಿ ಕೂಸು ಬಡವಾಯಿತು~ ಎಂಬುದೊಂದು ಜನಪ್ರಿಯ ಗಾದೆಯಷ್ಟೆ. 1953ರಲ್ಲಿ ಆಂಧ್ರದ ರಾಜಧಾನಿ ಯಾವುದಾಗಬೇಕೆಂದು ತಮಿಳುನಾಡಿನ ಮುಖ್ಯಮಂತ್ರಿ ರಾಜಾಜಿ, ಆಂಧ್ರದ ಮುಖ್ಯಮಂತ್ರಿ ಪ್ರಕಾಶಂ ಪರಸ್ಪರ ವಾಗ್ಯುದ್ಧದಲ್ಲಿ ತೊಡಗಿದ್ದಾಗ ವ್ಯಂಗ್ಯಚಿತ್ರಕಾರ ಶಂಕರ್ ರಚಿಸಿದ ಚಿತ್ರ ಇದು (ಚಿತ್ರ 3).

`ಅವನ ತೊಡುಗೆ ಇವಳಿಗಿಟ್ಟು, ಇವಳ ತಲೆಯನವಳಿಗಿಟ್ಟು~ ಎಂಬಂತೆ ಇಲ್ಲಿ ಪುರುಷರಾದ ಧುರೀಣರು ಮಹಿಳೆಯರಾಗಿ ಅವತರಿಸಿರುವುದು ಅರ್ಥಪೂರ್ಣ. ಇದೇ ರೀತಿ ಮನುಷ್ಯರಿಗೆ ಪ್ರಾಣಿ ಲಕ್ಷಣಗಳನ್ನು ಆರೋಪಿಸುವ ಇನ್ನೊಂದು ಸಾರ್ಥಕ ವ್ಯಂಗ್ಯಚಿತ್ರ ಅಬು ಅಬ್ರಹಾಂ ಅವರದು (ಚಿತ್ರ 4).

ಕನ್ನಡ ಕಾವ್ಯದಲ್ಲಿ ಗೋಪಾಲಕೃಷ್ಣ ಅಡಿಗರಷ್ಟು ವಿಪುಲವಾಗಿ ಶಾಬ್ದಿಕ ವ್ಯಂಗ್ಯಚಿತ್ರಗಳನ್ನು ರಚಿಸಿದ ಕವಿ ಬಹುಶಃ ಇನ್ನೊಬ್ಬರಿಲ್ಲ. ಉದಾಹರಣೆಗೆ ಅವರ `ನೆಹರೂ ನಿವೃತ್ತರಾಗುವುದಿಲ್ಲ~ ಎಂಬ ಕವನದಲ್ಲಿರುವ ಈ ಸಾಲುಗಳನ್ನು ನೋಡಿ:

ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ;
ಇಲ್ಲದ ತೃತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ

ಅಸಾಧ್ಯವಾದದ್ದನ್ನು ಸಾಧಿಸಬಲ್ಲೆನೆಂದು ಬೀಗುವ ಮನಃಸ್ಥಿತಿಗೆ ಇಲ್ಲೊಂದು ಪ್ರತಿಮೆಯಿದೆಯಷ್ಟೆ. ವ್ಯಂಗ್ಯಚಿತ್ರಕಾರನೊಬ್ಬ ಇದೇ ಪ್ರತಿಮೆಯನ್ನು ಬಳಸಿಕೊಂಡರೆ ಏನಾಗಬಹುದು? 1963ರಲ್ಲಿ ವ್ಯಂಗ್ಯಚಿತ್ರಕಾರ ಶಂಕರ್ ಇದೇ ಪ್ರತಿಮೆಯನ್ನು ಬಳಸಿಕೊಂಡು ನೆಹರೂ ಅವರ ಅಂದಿನ ಉದ್ದೇಶವನ್ನು ಚಿತ್ರಿಸಿದ್ದು ಹೀಗೆ (ಚಿತ್ರ 5).

ವ್ಯಂಗ್ಯಚಿತ್ರಕಾರರು ಸಾಮಾನ್ಯವಾಗಿ ಉಪಯೋಗಿಸುವ ಇನ್ನೊಂದು ಅಸ್ತ್ರವೆಂದರೆ ಎಲ್ಲರಿಗೂ ಅರ್ಥವಾಗುವ, ಪರಸ್ಪರ ವಿರುದ್ಧವಾದ ಎರಡು ಪ್ರತಿಮೆಗಳನ್ನು ಒಟ್ಟಿಗೆ ತರುವುದು. ಇದನ್ನು ಹೇಗೆಲ್ಲ ಬಳಸಬಹುದೆಂದು ತೋರಿಸಿಕೊಟ್ಟವನು ಇಂಗ್ಲಿಷಿನ ಅತ್ಯಂತ ಶ್ರೇಷ್ಠ ಲೇಖಕ ಜೊನಾಥನ್ ಸ್ವಿಫ್ಟ್.
 
ಈತ ಲಿಲಿಪುಟರ ಮಧ್ಯದಲ್ಲಿರುವ ಗಲಿವರನ ಮೂಲಕ ನೋಡುವಂತೆ ನಮ್ಮನ್ನು ಪ್ರೇರೇಪಿಸಿ, ಮನುಷ್ಯನ ಜಗತ್ತು ಎಷ್ಟೆಲ್ಲ ಹಾಸ್ಯಾಸ್ಪದವಾಗಿದೆಯೆಂದೂ ಬ್ರಾಬ್ಡಿಂಗ್‌ನಾಗ್‌ನ ದೈತ್ಯ ದೊರೆಯ ದೃಷ್ಟಿಯಲ್ಲಿ ಗಲಿವರ್ ಎಂಥ ಯಃಕಶ್ಚಿತ್ ಹುಳುವಾಗಿ ಕಾಣುತ್ತಾನೆಂದೂ ತೋರಿಸಿಕೊಟ್ಟ.

ಸ್ವಿಫ್ಟನ ಈ ವಿಧಾನ ಬ್ರಿಟನ್ನಿನ ಖ್ಯಾತ ವ್ಯಂಗ್ಯಚಿತ್ರಕಾರ ಡೇವಿಡ್ ಲೋನ ಒಂದು ವ್ಯಂಗ್ಯಚಿತ್ರದಲ್ಲಿ ತೀರ ಪರಿಣಾಮಕಾರಿಯಾಗಿ ಕೆಲಸಮಾಡಿತು. ಆ ಚಿತ್ರದಲ್ಲಿ ದೇವರ ಒಂದು ಬೃಹತ್ ಕರವಿದೆ. ಆ ಕರದಲ್ಲಿ ಪುಟಾಣಿ ರೂಪದ ರಾಜಕಾರಣಿಗಳಿದ್ದಾರೆ. 1933ರ ಮೇ 5ರಂದು ಪ್ರಕಟವಾದ ಆ ವ್ಯಂಗ್ಯಚಿತ್ರದ ಶೀರ್ಷಿಕೆ: `ಸಣ್ಣ ಜನರೇ, ಸಣ್ಣ ಜನರೇ, ನೀವೊಂದು ಪಾಠ ಕಲಿಯಬೇಕೆ?~.

ಈ ಪ್ರಶ್ನೆಗೆ ಉತ್ತರವನ್ನು ನಂತರದ ನಮ್ಮ ಚರಿತ್ರೆಯ ಪಠ್ಯಪುಸ್ತಕಗಳೇ ಸಾರಿಹೇಳಿದುವು. ದೈಹಿಕ ಚಹರೆಯನ್ನು ಈ ರೀತಿ ಅತಿಶಯಗೊಳಿಸುವ ಇನ್ನೊಂದು ವ್ಯಂಗ್ಯಚಿತ್ರ 1864ರಲ್ಲಿ ಫ್ರಾಂಕ್ ಬೆಲೊ ರಚಿಸಿದ್ದು. ಇದರಲ್ಲಿ ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷನಾಗಿ ಚುನಾಯಿತನಾದ ಅಬ್ರಹಾಂ ಲಿಂಕನ್ ಹೇಗಿದ್ದಾನೆ ನೋಡಿ (ಚಿತ್ರ 6).

ಭಾಷೆ ಏನೆಲ್ಲಾ ರೂಪಕಗಳನ್ನು ಒದಗಿಸುತ್ತದೆಯೆಂದು ನಮಗೆ ಗೊತ್ತು. ಅವುಗಳಲ್ಲಿ ಪರಸ್ಪರ ವಿರುದ್ಧ ಅರ್ಥಗಳನ್ನು ಸಾಂಕೇತಿಸುವ ದ್ವಂದ್ವಗಳೂ ಇವೆಯಲ್ಲವೆ? ಹಗಲು ಇರುಳು, ಬೆಳಕು ಕತ್ತಲು, ಸೌಂದರ್ಯ ಕುರೂಪ, ದೊಡ್ಡದು ಸಣ್ಣದು, ಇವೇ ಮೊದಲಾದ ದ್ವಂದ್ವಗಳು ವ್ಯಂಗ್ಯಚಿತ್ರಕಾರನ ವಿಶ್ವವನ್ನು ಸಂಪದ್ಭರಿತಗೊಳಿಸುವ ಮೂಲಭೂತ ರೂಪಕಗಳಾಗುತ್ತವೆ. 

ನಮ್ಮ ಸಾಹಿತ್ಯದಲ್ಲಿ ಬಳಸಿ ಬಳಸಿ ಸವಕಲಾದ ನುಡಿಗಟ್ಟುಗಳೂ ಉಂಟಷ್ಟೆ. ಇವುಗಳನ್ನು ಕ್ಲೀಷೆಗಳು ಎನ್ನುತ್ತಾರೆ. ವ್ಯಂಗ್ಯಚಿತ್ರಕಾರರ ಉದ್ದೇಶಕ್ಕೆ ಈ ಕ್ಷೀಷೆಗಳೇ ಮತ್ತೆ ಮತ್ತೆ ಉಪಯೋಗಕ್ಕೆ ಬರುವುದೊಂದು ವಿಶೇಷ. ಕುದುರೆಯಿಂದ ಕೆಳಗೆ ಬಿದ್ದ ಸವಾರ, ಲಟ್ಟಣಿಗೆ ಹಿಡಿದಿರುವ ಗೃಹಿಣಿ, ಹಳ್ಳಕ್ಕೆ ಬಿದ್ದಿರುವ ಬಡಪಾಯಿ, ಶರಪಂಜರದ ಮೇಲೆ ಮಲಗಿರುವ ಯೋಗಿ, ಮಾಂತ್ರಿಕ ರತ್ನಗಂಬಳಿ, ಮನೋವಿಶ್ಲೇಷಕನ ಎದುರಿಗಿರುವ ಮಂಚ, ಕಿರಾತರು ಭಾರಿ ಕಡಾಯಿಯೊಂದರಲ್ಲಿ ಬೇಯಿಸುತ್ತಿರುವ ಧರ್ಮ ಪ್ರಚಾರಕ, ತಿರುಪೆಯೆತ್ತುತ್ತಿರುವ

ಭಿಕಾರಿ, ಇನ್ನೊಂದು ಗ್ರಹದಿಂದ ಬಂದಿಳಿದಿರುವ ಜೀವಿ, ಮಾನವೀಯ ಪ್ರತಿಕ್ರಿಯೆ ತೋರುತ್ತಿರುವ ಕಂಪ್ಯೂಟರ್, ಬಸ್ ಚಾಲಕಿ, ಮೊಸಳೆ ಕಣ್ಣೀರು, ಹೀಗೆ ಸವಕಲಾಗಿರುವ ಚರ್ವಿತಚರ್ವಣಗಳು ನಮ್ಮ ಪತ್ರಿಕೆಗಳ ಪುಟ ಪುಟಗಳಲ್ಲೂ ಕಂಡುಬರುತ್ತವೆ. ವ್ಯಂಗ್ಯಚಿತ್ರಕಾರ ಇವುಗಳನ್ನೇ ಮಾರ್ಪಡಿಸಿ ಹೊಸ ಹೊಸ ಅರ್ಥಗಳನ್ನು ಸೃಷ್ಟಿಸುತ್ತಾನೆ.

ಅಮೆರಿಕದ ವ್ಯಂಗ್ಯಚಿತ್ರಕಾರ ಡೇವಿಡ್ ಲೆವಿನ್ ಮೊಸಳೆ ಕಣ್ಣೀರು ಸುರಿಸುತ್ತಿರುವ ಅಮೆರಿಕದ ಅಧ್ಯಕ್ಷ ಲಿಂಡನ್ ಜಾನ್ಸನ್ನನನ್ನು ಚಿತ್ರಿಸಿರುವುದು ಹೀಗೆ (ಚಿತ್ರ 7). ಮೊದಲ ಚಿತ್ರದಲ್ಲಿ ಜಾನ್ಸನ್ ಕಣ್ಣಹನಿಯ ರೂಪದಲ್ಲಿ ಸುರಿಸುತ್ತಿರುವುದು ಮೊಸಳೆಗಳನ್ನು; ಎರಡನೆಯ ಚಿತ್ರದಲ್ಲಿ ಮೊಸಳೆ ಸುರಿಸುತ್ತಿರುವುದು ಕಣ್ಣಹನಿಯ ರೂಪದ ಜಾನ್ಸನ್ನನ್ನು. ಇನ್ನೊಂದು ಉದಾಹರಣೆ ಬೇಕಾದರೆ ಆರ್.ಕೆ. ಲಕ್ಷ್ಮ್ಮಣ್ ರಚಿಸಿದ, ನೆಹರೂ ಅವರ ಅವಸ್ಥೆಯನ್ನು ಧ್ವನಿಸುವ ಈ ಚಿತ್ರವನ್ನು ನೋಡಿಕೊಳ್ಳಿ (ಚಿತ್ರ 8).

ನಾವು ವ್ಯಂಗ್ಯಚಿತ್ರಗಳ ಬಗ್ಗೆ ಮಾತಾಡುವಾಗ ಆ ಚಿತ್ರಗಳಲ್ಲಿರುವ ಹಾಸ್ಯ ಸನ್ನಿವೇಶಗಳಿಗಷ್ಟೇ ಮಹತ್ವ ಕೊಡುವ ಅಪಾಯವುಂಟು. ವ್ಯಂಗ್ಯಚಿತ್ರಕಾರನ ಬತ್ತಳಿಕೆಯಲ್ಲಿ ಹಾಸ್ಯವೊಂದೇ ಪ್ರಮುಖ ಅಸ್ತ್ರವಾಗಿರುತ್ತದೆ ಎನ್ನುವಂತಿಲ್ಲ. ವ್ಯಂಗ್ಯಚಿತ್ರವೊಂದನ್ನು ನೋಡಿ ನಾವು ನಗುತ್ತೇವೋ ಬಿಡುತ್ತೇವೋ ಅದು ವಿಷಯದ ಗಾಂಭೀರ್ಯವನ್ನೇ ಅವಲಂಬಿಸಿರುತ್ತದೆ.

ವ್ಯಂಗ್ಯಚಿತ್ರಗಳು ಪ್ರಚಾರಸಾಧನಗಳಾಗಿ ನಮ್ಮ ಅಭಿಪ್ರಾಯಗಳನ್ನು ಬದಲಾಯಿಸುತ್ತವೆಯೆ? ಇದು ಉತ್ತರಿಸಲಾಗದ ಪ್ರಶ್ನೆ. ರಾಜಕೀಯ ವ್ಯಂಗ್ಯಚಿತ್ರವೊಂದು ಹೆಚ್ಚೆಂದರೆ ಒಂದು ವಿದ್ಯಮಾನದ ಮೇಲೆ ಅಥವಾ ಒಂದು ಸಮಸ್ಯೆಯ ಮೇಲೆ ನಮ್ಮ ಗಮನ ಕೇಂದ್ರೀಕರಿಸುತ್ತದೆ ಅಷ್ಟೇ. ಆರ್.ಕೆ. ಲಕ್ಷ್ಮಣ್ ಅವರ ಈ ಚಿತ್ರದಲ್ಲಿ ಒಂದು ನಿರ್ದಿಷ್ಟ ಸನ್ನಿವೇಶವಷ್ಟೇ ಹಾಸ್ಯಮಯವಾಗಿದೆ. ಆದರೆ ಅದು ಟೀಕಿಸುತ್ತಿರುವ ವಿಷಯ ಹಾಸ್ಯವಲ್ಲ (ಚಿತ್ರ 9).

ಕ್ಯಾರಿಕೇಚರ್ ಅಥವಾ ವ್ಯಂಗ್ಯಭಾವಚಿತ್ರವನ್ನು ಮೊಟ್ಟಮೊದಲು ರೂಪಿಸಿದವನು ಇಟಾಲಿಯನ್ ಕಲಾವಿದ ಅನಿಬೇಲ್ ಕ್ಯಾರಕಾಸಿ. ಅವನ ಪ್ರಕಾರ ವ್ಯಕ್ತಿಯೊಬ್ಬನ ಕುರೂಪವಿರೂಪಗಳನ್ನು ಕರಾರುವಾಕ್ಕಾಗಿ ಸೆರೆಹಿಡಿದು, ಅವುಗಳ ಮೂಲಕ ಅವನ ವ್ಯಕ್ತಿತ್ವದ ಸಾರವನ್ನು ಮೂರ್ತೀಕರಿಸುವುದೇ ವ್ಯಂಗ್ಯಚಿತ್ರಕಾರನ ಕೆಲಸ. ನಂತರ 1830ರಲ್ಲಿ ಫ್ರಾನ್ಸಿನಲ್ಲಿ ಚಾರ್ಲ್ಸ್ ಫಿಲಿಪೋನ್ ಎನ್ನುವವನು `ಲ ಚಾರಿವಾರಿ~ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ.

ಅದರ ಒಂದು ಸಂಚಿಕೆಯಲ್ಲಿ ಕಲಾವಿದ ಹೊನೊರ್ ದಾಮಿಯೆ, ಸರ್ವಾಧಿಕಾರಿಯಾಗಿದ್ದ ದೊರೆ ಲೂಯಿ ಫಿಲಿಪ್‌ನನ್ನು ಚಿತ್ರಿಸಿದ ರೀತಿಯಲ್ಲಿ ವ್ಯಂಗ್ಯಚಿತ್ರವೆನ್ನುವುದು ಎಂಥ ಪರಿಣಾಮಕಾರಿ ಆಯುಧವಾಗುವುದೆಂದು ಸಾಬೀತಾಯಿತು. ಆ ಚಿತ್ರದಲ್ಲಿ ದೊರೆ ಲೂಯಿ ಫಿಲಿಪ್ ಕ್ರಮಕ್ರಮವಾಗಿ ರೂಪಾಂತರಗೊಂಡು ಕೊನೆಗೆ ಒಂದು ಅಂಜೂರವಾಗಿಬಿಟ್ಟಿದ್ದಾನೆ!
(ಚಿತ್ರ 10). ಆದರೂ ಶತಮಾನಗಳಷ್ಟು ಹಿಂದಿನ ಫ್ರಾನ್ಸಿನಲ್ಲಿ ನಿರಂಕುಶ ಪ್ರಭುತ್ವದ ಸುಧಾರಣೆಗಾಗಿ ಹುಟ್ಟಿಕೊಂಡದ್ದು ಚಾಟುನುಡಿಗಳೇ ಹೊರತು ವ್ಯಂಗ್ಯಚಿತ್ರಗಳಲ್ಲ. ರಷ್ಯಾದಲ್ಲಿ ಆಳರಸರನ್ನು ಕೊಲ್ಲುವ ಮೂಲಕ ನಿರಂಕುಶ ಪ್ರಭುತ್ವವನ್ನು ಸುಧಾರಣೆಗೆ ತಂದರು. ಆದರೆ ಇಂಗ್ಲೆಂಡಿನಲ್ಲಿ ಮಾತ್ರ ವ್ಯಂಗ್ಯಚಿತ್ರಗಳ ಸೂಜಿಮೊನೆಯಿಂದ ಆಳುವ ಕೆಲವೇ ಮಂದಿ ಅರಸು ಮನೆತನದವರ ಅಧಿಕಾರಲಾಲಸೆಯ ಬಲೂನನ್ನು ಚುಚ್ಚಿಹಾಕಿದರು.
 
ವ್ಯಂಗ್ಯಚಿತ್ರ ಕಲೆ ಇಟಲಿಯಲ್ಲಿ ಹುಟ್ಟಿ, ಫ್ರಾನ್ಸ್, ಜರ್ಮನಿ, ಹಾಲೆಂಡುಗಳಲ್ಲಿ ಬೆಳೆಯಿತು, ನಿಜ. ಆದರೆ ಅದು ಜನಪ್ರಿಯವಾದದ್ದು, ಸಮಾಜದ ಪ್ರಜಾತಂತ್ರೀಯ ವ್ಯವಸ್ಥೆಯ, ಅಸಮ್ಮತಿಯ ಒಂದು ಪ್ರಬಲ ವಾಹಕವಾಗಿದ್ದು ಇಂಗ್ಲೆಂಡಿನಲ್ಲಿ. ಕ್ರಿಕೆಟ್ಟಿನಂತೆ ವ್ಯಂಗ್ಯಚಿತ್ರ ಕಲೆ ಕೂಡ ಬ್ರಿಟಿಷರ ಜೊತೆಗೇ ಭಾರತಕ್ಕೆ ಬಂದಿತು. ಅವರ ಆಗಮನವಾದದ್ದೇ ಭಾರತದಲ್ಲಿ ಮುದ್ರಣ ಯಂತ್ರಗಳೂ ಹುಟ್ಟಿಕೊಂಡವು.

ವಿಪರ್ಯಾಸವೆಂದರೆ ಅವರ ಆಳ್ವಿಕೆ ಅಸಹನೀಯವಾದದ್ದೇ ನಮ್ಮ ಪತ್ರಿಕೆಗಳ ವ್ಯಂಗ್ಯಚಿತ್ರಗಳು ಪ್ರತಿಭಟನೆಯ, ದಂಗೆಯ, ಶಾಂತಿಯುತ ಕ್ರಾಂತಿಯ ವಾಹಕಗಳಾದದ್ದು. 
`ವ್ಯಂಗ್ಯಚಿತ್ರವೆನ್ನುವುದು ಬಹುಮಟ್ಟಿಗೆ ನಮ್ಮ ಕಾಲದ ಅತ್ಯಂತ ನೈಜಚರಿತ್ರೆಯೇ~ ಎಂದ ಎಮರ್ಸನ್. ಭಾರತದ ಕಳೆದೊಂದು ಶತಮಾನದ ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ನಮ್ಮ ಶ್ರೇಷ್ಠ ವ್ಯಂಗ್ಯಚಿತ್ರಗಳ ಮುಖಾಂತರ ಪರಿಶೀಲಿಸಿದಾಗ ಆ ಮಾತಿನಲ್ಲಿ ಎಂಥ ಸತ್ಯವಡಗಿದೆಯೆಂದು ತಿಳಿದೀತು.

ನಮ್ಮ ಅತ್ಯುತ್ತಮ ವ್ಯಂಗ್ಯಚಿತ್ರಗಳು ಅಧಿಕಾರ ಮದದಿಂದ ವರ್ತಿಸುವವರನ್ನು ಮಟ್ಟಹಾಕಿವೆ, ಕೆಳಗೆ ಬಿದ್ದವರನ್ನು ಮೇಲೆತ್ತಿ ಹಾಡಿಹೊಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಅವು ರಾಜಕೀಯ ಹಾಗೂ ಸಾಮಾಜಿಕ ಪರಿಸರದಲ್ಲಿ ವಿನೋದವನ್ನು ಸೃಷ್ಟಿಸುತ್ತಲೇ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿವೆ.
 

ಚಿತ್ರ ಶೀರ್ಷಿಕೆಗಳು
2. ಅಬು ಅಬ್ರಹಾಂ: ಗಾಂಧಿಯನ್ನು ಹುಡುಕುತ್ತಿರುವ ರಾಜಕಾರಣಿಗಳು
3. ಶಂಕರ್: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆಂಧ್ರದ ರಾಜಧಾನಿ ಯಾವುದಾಗಬೇಕೆಂದು ನಿರ್ಧರಿಸಲಾಗಲಿಲ್ಲ. (ರಾಜಾಜಿ, ಪ್ರಕಾಶಂ ಎಳೆದಾಡುತ್ತಿರುವ ಮಗು ಮದರಾಸು, 1953)
4. ಅಬು ಅಬ್ರಹಾಂ: (ರಾಜೀವ ಗಾಂಧಿ) ರಾಜಕೀಯಕ್ಕೆ ಹೊಸಬರು; ಅವರಿಗೆ (ನಮ್ಮ) ಸಹಾಯ ಬೇಕು.
5. ಶಂಕರ್: ಕಾಂಗ್ರೆಸ್ಸಿನ ಗುರಿ ಸಮಾಜವಾದ ಮತ್ತು ಪ್ರಜಾಪ್ರಭುತ್ವ ಎಂದು ಎಐಸಿಸಿ ಪುನರುಚ್ಚರಿಸಿದೆ (1963)
6. ಫ್ರಾಂಕ್ ಬೆಲೊ: ಅಬ್ರಹಾಂ ಲಿಂಕನ್ ಎರಡನೆಯ ಬಾರಿ ಅಧ್ಯಕ್ಷನಾಗಿ ಚುನಾಯಿತನಾದಾಗ (1864)
7. ಡೇವಿಡ್ ಲೆವಿನ್: ಲಿಂಡನ್ ಜಾನ್ಸನ್ನನ ಮೊಸಳೆ ಕಣ್ಣೀರು (1966)
8. ಆರ್.ಕೆ. ಲಕ್ಷ್ಮಣ್: ಸಭಿಕರಲ್ಲಿ ಯಾರಾದರೂ ತಬಲ ಬಾರಿಸುವವರು ಇದ್ದೀರಾ? ಇಲ್ಲವಾ? ಸರಿ ಸರಿ...
9. ಆರ್.ಕೆ. ಲಕ್ಷ್ಮಣ್: ಓಕೆ, ನೀವು, ನೀವೇ ಮುಖ್ಯಮಂತ್ರಿ. ನಿಮ್ಮ ಹೆಸರೇನು?
10. ದಾಮಿಯೆ: ಫ್ರಾನ್ಸಿನ ದೊರೆ ಲೂಯಿ ಫಿಲಿಪ್‌ನ ಅವತಾರಗಳು
11. ಬಿ.ವಿ.ರಾಮಮೂರ್ತಿ ಅವರ ಒಂದು ಕಾರ್ಟೂನ್


ಕೊನೆಯದಾಗಿ ಕರ್ನಾಟಕದ ಪರಮಶ್ರೇಷ್ಠ ವ್ಯಂಗ್ಯಚಿತ್ರಕಾರ ದಿವಂಗತ ಬಿ.ವಿ.ರಾಮಮೂರ್ತಿ ಅವರ ಕೃತಿಯೊಂದು ಇಲ್ಲಿದೆ. ಇದನ್ನು ನೀವೇ ಸೂಕ್ಷ್ಮವಾಗಿ ನೋಡುತ್ತ ಓದಿಕೊಳ್ಳಿ (ಚಿತ್ರ 11).     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT