ಬೆಂಗಳೂರು: `ಈವರೆಗೆ ರಾಜಕೀಯ ಕ್ಷೇತ್ರದಲ್ಲಿ ಹಲವು ತಪ್ಪುಗಳು ಸಂಭವಿಸಿದೆ. ಇದನ್ನು ವೀರಶೈವ ಧರ್ಮದವರು ಕ್ಷಮಿಸಿ, ಮುಂದಿನ ರಾಜಕೀಯ ಬೆಳವಣಿಗೆಗೆ ಸಹಕರಿಸಬೇಕು~ ಎಂದು ಸಚಿವ ವಿ.ಸೋಮಣ್ಣ ಕರೆ ನೀಡಿದರು.
ಲೋಕೇಶ್ವರ ಅಭಿಮಾನಿಗಳ ಬಳಗವು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧರಾಮೇಶ್ವರರ ಜಯಂತ್ಸುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಸಿದ್ದಾರಾಮೇಶ್ವರನ್ನು ವೀರಶೈವ ಧರ್ಮ ಮಾತ್ರವಲ್ಲ ಬೋವಿ ಜನಾಂಗದವರು ಆರಾಧಿಸುತ್ತಾರೆ. ಅವರ ಜಯಂತ್ಸುತ್ಸವದಲ್ಲಿ ಎಲ್ಲಾ ಜಾತಿ, ಧರ್ಮದವರು ಭಾಗವಹಿಸುವುದು ಅವರ ವ್ಯಕ್ತಿತ್ವದ ಮಹತ್ವವನ್ನು ತಿಳಿಸುತ್ತದೆ. ಅವರ ತತ್ವಗಳನ್ನು ಪ್ರಸ್ತುತ ಸಂದರ್ಭದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ~ ಎಂದು ಹೇಳಿದರು.
ತಿಪಟೂರಿನ ಗುರುಪರದೇಶಿಕೇಂದ್ರ ಸ್ವಾಮೀಜಿ ಮತ್ತು ಪೊಲೀಸ್ ಅಧಿಕಾರಿ ಲೋಕೇಶ್ವರ ಅವರನ್ನು ಸನ್ಮಾನಿಸಲಾಯಿತು. ಶಾಸಕ ಪುಟ್ಟೇಗೌಡ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಇತರರು ಉಪಸ್ಥಿತರಿದ್ದರು.