ನವದೆಹಲಿ (ಪಿಟಿಐ): ದೇವಯಾನಿ ಖೋಬ್ರಾಗಡೆ ಅವರ ಬಂಧನದಿಂದ ಅಮೆರಿಕ ಹಾಗೂ ಭಾರತದ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಭಾನುವಾರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಕ್ಕಿಂತಲೂ ಮೊದಲಿನ ಪ್ರಕ್ರಿಯೆಗಳಿಂದ ತಮಗೆ ವಿನಾಯ್ತಿ ನೀಡುವಂತೆ ಕೋರಿ ದೇವಯಾನಿ ಅವರು ಅಮೆರಿಕದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತ ನಿರ್ಧಾರ ಸೋಮವಾರ ಹೊರಬೀಳಲಿದೆ.
ಬಂಧನ ಪ್ರಕರಣದ ನಂತರ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖುರ್ಷಿದ್, ‘ಜಗತ್ತು ಮುಂದಕ್ಕೆ ಸಾಗುತ್ತಲೇ ಇರುತ್ತದೆ. ಅದು ಎಲ್ಲೂ ನಿಲ್ಲುವುದಿಲ್ಲ. ಸಾಯುವುದೂ ಇಲ್ಲ. ಏನಾದರೂ ನಡೆದೇ ನಡೆಯುತ್ತದೆ’ ಎಂದು ಹೇಳಿದರು.
ಉಭಯ ರಾಷ್ಟ್ರಗಳ ಬಾಂಧವ್ಯದ ಕುರಿತಂತೆ ತಮ್ಮ ಹೇಳಿಕೆಯನ್ನು ಅಮೆರಿಕ ಸ್ವಾಗತಿಸಿರುವುದರ ಬಗ್ಗೆ ಗಮನ ಸೆಳೆದಾಗ, ‘ಕೇವಲ ಹೇಳಿಕೆ ಸ್ವಾಗತಿಸಿದರೆ ಸಾಲದು. ಅವರು ಏನಾದರೂ ಮಾಡಲೇಬೇಕು’ ಎಂದರು.
ವಿನಾಯ್ತಿ ನೀಡಲು ಮನವಿ (ವಿಶ್ವಸಂಸ್ಥೆ ವರದಿ): ಹೆಚ್ಚಿನ ವಿನಾಯ್ತಿ ಸೌಲಭ್ಯ ಪಡೆಯುವುದಕ್ಕಾಗಿ ವಿಶ್ವಸಂಸ್ಥೆಗೆ ಸಲಹೆಗಾರರಾಗಿ ವರ್ಗಾವಣೆಗೊಂಡಿರುವ ದೇವಯಾನಿ ಖೋಬ್ರಾಗಡೆ ಅವರಿಗೆ ರಾಜತಾಂತ್ರಿಕ ಅಧಿಕಾರಿಗೆ ನೀಡುವ ಎಲ್ಲಾ ವಿನಾಯ್ತಿಗಳನ್ನು ನೀಡುವಂತೆ ಭಾರತವು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಮನವಿ ಮಾಡಿದೆ.
ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಆಗಿರುವ ಅಶೋಕ್ ಮುಖರ್ಜಿ ಅವರು ಈ ಸಂಬಂಧ, ಡಿಸೆಂಬರ್ 18–19ರಂದು ಬಾನ್ ಕಿ–--ಮೂನ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದ ಜೊತೆಗೆ ದೇವಯಾನಿ ಅವರ ಪಾಸ್ಪೋರ್ಟ್ ಮಾಹಿತಿಗಳು ಸೇರಿದಂತೆ ಹಲವು ದಾಖಲೆಗಳನ್ನೂ ಮುಖರ್ಜಿ ಕಳುಹಿಸಿದ್ದಾರೆ.
‘ದೇವಯಾನಿ ಅವರನ್ನು ಸಲಹೆಗಾರರಾಗಿ ವರ್ಗಾವಣೆ ಮಾಡಿರುವ ಮಾಹಿತಿಯನ್ನು ತಿಳಿಸಿ ಮತ್ತು ರಾಜತಾಂತ್ರಿಕ ಅಧಿಕಾರಿಗೆ ಇರುವ ಎಲ್ಲಾ ವಿನಾಯ್ತಿ ಸೌಲಭ್ಯಗಳನ್ನು ಅವರಿಗೂ ನೀಡುವಂತೆ ಮನವಿ ಮಾಡಿ ನಾನು ಬಾನ್ ಕಿ ಮೂನ್ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಮುಖರ್ಜಿ ಹೇಳಿದ್ದಾರೆ.
ಭಾರತದಿಂದ ಅಧಿಕೃತ ಪತ್ರ ಬಂದಿರುವುದನ್ನು ವಿಶ್ವಸಂಸ್ಥೆ ದೃಢಪಡಿಸಿದೆ. ಭಾರತದ ಮನವಿ ಕುರಿತು ಪ್ರತಿಕ್ರಿ ಯಿಸಿರುವ ವಿಶ್ವಸಂಸ್ಥೆ, ‘ನಿಯಮಗಳಿಗೆ ಅನುಸಾರ’ ಮನವಿ ಪರಿಶೀಲಿಸುವುದಾಗಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.