ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ ದಿನ ರಾಜನಗರದ ನೂತನ ಶಾಲಾ ಕಟ್ಟಡಕ್ಕೆ ಕೇಂದ್ರೀಯ ವಿದ್ಯಾಲಯ ಉದ್ಘಾಟನೆಯಾಗಲಿದೆ ಎಂದು ನಿರೀಕ್ಷಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಈಗ ಮತ್ತೊಮ್ಮೆ ನಿರಾಶೆ ಕಾದಿದೆ.
ರಾಜನಗರದಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣವಾಗಿದೆ.
`ಜೆ.ಎನ್. ಕನ್ಸ್ಟ್ರಕ್ಷನ್ ಕಂಪೆನಿ ಶಾಲಾ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಎಲೆಕ್ಟ್ರಿಕಲ್ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ಅಕ್ಟೋಬರ್ 30ಕ್ಕೆ ಹೊಸ ಶಾಲಾ ಕಟ್ಟಡವನ್ನು ಕೆವಿಎಸ್ಗೆ ಹಸ್ತಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು `ಪ್ರಜಾವಾಣಿ~ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಹೇಮರಾಜು.
`ಪಾಲಕರ ತೀವ್ರ ಒತ್ತಡದ ನಂತರ ಕಳೆದ ತಿಂಗಳು ವೈರಿಂಗ್ ಕಾರ್ಯ ಆರಂಭಿಸಿದ್ದ `ಸಂತೋಷ್ ಎಲೆಕ್ಟ್ರಿಕಲ್ಸ್~ ಈಗಾಗಲೇ ಶೇ 75ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಇರುವ ತಾಂತ್ರಿಕ ಅಡಚಣೆ ಇನ್ನೂ ನಿವಾರಣೆಯಾಗಿಲ್ಲ.
ಈ ಮೊದಲು ಶಾಲೆ ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಈ ಕಟ್ಟಡಕ್ಕೆ ತೆಗೆದುಕೊಳ್ಳಲು ಹೆಸ್ಕಾಂ ಅನುಮತಿ ನೀಡುತ್ತಿಲ್ಲ. ಹೊಸ ಕಟ್ಟಡದಲ್ಲಿ ಕೊಠಡಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ~ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಮೂಲಗಳು ವಿವರಿಸಿವೆ.
ಕಳೆದ ತಿಂಗಳ 5 ರಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದ ಕೆವಿಎಸ್ ಸಹಾಯಕ ಆಯುಕ್ತೆ ಆರ್. ರಾಜೇಶ್ವರಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೇ ಕನ್ನಡ ರಾಜ್ಯೋತ್ಸವದ ದಿನ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದೂ ಪಾಲಕರ ಸಂಘದ ಪದಾಧಿಕಾರಿಗಳಿಗೆ ಅವರು ಭರವಸೆ ನೀಡಿದ್ದರು.
ಶಾಲೆಗೆ ಅಗತ್ಯವಿರುವ ಪೀಠೋಪಕರಣ ಹಾಗೂ ಬೋರ್ಡ್ ಮಾದರಿಯನ್ನು ಇದೇ ಸಂದರ್ಭದಲ್ಲಿ ಅವರು ಅಂತಿಮಗೊಳಿಸಿದ್ದರು. ಆದರೆ ಪೀಠೋಪಕರಣ ಶಾಲೆಗೆ ಬರುವುದಿರಲಿ, ಈವರೆಗೆ ಟೆಂಡರ್ ಕೂಡ ಕರೆದಿಲ್ಲ~ ಎಂದು ತಿಳಿದುಬಂದಿದೆ.
`ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದ್ದರೆ ಮತ್ತೆ ಆರು ತಿಂಗಳು ಬೇಕಾಗುತ್ತದೆ. ಸಂಘಟನೆಯ ಅಧಿಕಾರಿಗಳ ನಿಧಾನಗತಿ ಕಾರ್ಯವೈಖರಿಯಿಂದಾಗಿ ಮಕ್ಕಳು ಹಾಗೂ ಪಾಲಕರು ಕಷ್ಟ ಅನುಭವಿಸುವುದು ಮುಂದುವರಿದಿದೆ~ ಎನ್ನುತ್ತಾರೆ ಪಾಲಕ ಎಂ.ಬಿ. ಕಲ್ಲೇದ.
`ಪ್ರಾಚಾರ್ಯರ ಹುದ್ದೆ ಖಾಲಿಯಾಗಿ ಆರು ತಿಂಗಳಾಯಿತು. ಶಾಲೆಯ ನಾಮನಿರ್ದೇಶಿತ ಅಧ್ಯಕ್ಷರಾಗಿದ್ದ ವಿನಯ ಜಾಂಬಳಿ ಅವರೂ ವರ್ಗವಾಗಿದ್ದಾರೆ. ಶಾಲೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಒಮ್ಮೆಯೂ ಶಾಲೆಗೆ ಭೇಟಿ ನೀಡಿಲ್ಲ. ಪಾಲಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ~ ಎಂದು ಎಸ್. ಕುಸುಮಾ ಬೇಸರ ವ್ಯಕ್ತಪಡಿಸುತ್ತಾರೆ.
`ಶಾಲೆ ಸ್ಥಳಾಂತರಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಪೋಷಕರು ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪಾಲಕರು ಮತ್ತೊಮ್ಮೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ~ ಎಂದು ಬಿ. ಸಹದೇವ ಎಚ್ಚರಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.