ಜೆಮ್ಶೆಡ್ಪುರ (ಪಿಟಿಐ): 2ಜಿ ತರಂಗಾಂತರ ಹಗರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿರುವ ಬಿಜೆಪಿಯು ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರನ್ನು ಬಂಧಿಸಿದರೆ ಸಾಲದು; ಅವರ ಹಿತರಕ್ಷರನ್ನೂ ಸರ್ಕಾರ ಬಂಧಿಸಬೇಕು ಎಂದು ಸೋಮವಾರ ಹೇಳಿದೆ.
‘ರಾಜಾ ಅವರ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ತುಂಬಾ ಸಣ್ಣದು. ಅಲ್ಲದೇ ತುಂಬಾ ತಡವಾಗಿ ಅವರನ್ನು ಬಂಧಿಸಿದೆ. ಇದೇ ಹಗರಣದಲ್ಲಿ ಭಾಗಿಯಾಗಿರುವ ರಾಜಾ ಏಳಿಗೆಗೆ ಕಾರಣರಾದವರನ್ನೂ ಪತ್ತೆ ಹಚ್ಚಲು ಸರ್ಕಾರ ಮುಂದಾಗಬೇಕು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಫೆಬ್ರುವರಿ 10ರಂದು ನಡೆಯಲಿರುವ ಖಾರ್ಸ್ವಾನ್ ವಿಧಾನಸಭಾ ಉಪಚನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರ ಪರ ಪ್ರಚಾರ ನಡೆಸಲು ಜಮ್ಶೆಡ್ಪುರಕ್ಕೆ ಆಗಮಿಸಿದರುವ ಪ್ರಧಾನ್ ಅವರು, ‘ಕಾಂಗ್ರೆಸ್ ಪಕ್ಷವು ಜೆಪಿಸಿ ಬಗ್ಗೆ ಯಾಕೆ ಅಷ್ಟು ಭಯಪಡುತ್ತಿದೆ?’ ಎಂದು ಪ್ರಶ್ನಿಸಿದರು.
ಬಿಜೆಪಿಯು 2ಜಿ ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟ ಹಗರಣ, ಬೆಲೆ ಏರಿಕೆ, ಕಪ್ಪು ಹಣದ ವಿಚಾರಗಳನ್ನು ಕುರಿತಂತೆ ಸಂಸತ್ನ ಒಳಗಡೆ ಮತ್ತು ಹೊರಗಡೆ ಪರಿಣಾಮಕಾರಿಯಾಗಿ ಕೆದಕಿದೆ ಎಂದೂ ಅವರು ಹೇಳಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಹಗರಣದಲ್ಲಿ ಭಾಗಿಯಾದ ಆರೋಪವನ್ನು ಎದುರಿಸುತ್ತಿರುವುದರಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಯನ್ನೂ ಹೊತ್ತಿರುವ ಪ್ರಧಾನ್, ‘ಯಡಿಯೂರಪ್ಪ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿರುವುದು ಅಲ್ಲಿನ ಜನರಿಗೆ ತಿಳಿದಿರುವುದರಿಂದ, ಅದೊಂದು ದೊಡ್ಡ ವಿಚಾರವೇ ಅಲ್ಲ’ ಎಂದರು.
ಕರ್ನಾಟಕ ಸರ್ಕಾರ ಈಗಾಗಲೇ ಈ ಹಗರಣದ ಮತ್ತು 15 ವರ್ಷಗಳಿಂದ ನಡೆದಿರುವ ಭೂಮಿ ಡಿನೋಟಿಫಿಕೇಶನ್ ಕುರಿತಂತೆ ತನಿಖೆ ನಡೆಸಲು ಆಯೋಗವನ್ನು ರಚಿಸಿದೆ ಎಂದು ಅವರು ಹೇಳಿದರು.