ಚೆನ್ನೈ (ಪಿಟಿಐ): ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಭಾನುವಾರ ಹೇಳಿದ್ದ ಡಿಎಂಕೆ ಖಜಾಂಚಿ ಮತ್ತು ಪಕ್ಷದ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರ ಸಾಲ್ಟಿನ್ ಅವರು ಹೇಳಿಕೆ ನೀಡಿದ ಗಂಟೆಯೊಳಗೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಚುನಾವಣೆಯಲ್ಲಿ ತಮ್ಮ ರಾಜಕೀಯ ಕಡು ವೈರಿ ಎಐಎಡಿಎಂಕೆ ಕೈಯಲ್ಲಿ ಪಕ್ಷವು ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಸಾಲ್ಟಿನ್ ಅವರು ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದ ಒಂದು ಗಂಟೆಯೊಳಗೆಯೇ, ಪಕ್ಷದ ವರಿಷ್ಠರ ಸಲಹೆ ಮೆರೆಗೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಸಾಲ್ಟಿನ್ ತಿಳಿಸಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿ ವಹಿಸಿದ್ದ ಸ್ಟಾಲಿನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು.
ಪುದುಚೇರಿಯ ಒಂದು ಮತ್ತು ತಮಿಳುನಾಡಿನ ಒಟ್ಟು 34 ಸ್ಥಾನಗಳಲ್ಲಿ ಒಂದೇ ಒಂದು ಸ್ಥಾನವನ್ನು ಕೂಡ ಗಳಿಸಲು ಡಿಎಂಕೆ ಈ ಬಾರಿ ಸಾಧ್ಯವಾಗಿಲ್ಲ.
ಆದಾಗ್ಯೂ, ಪಕ್ಷದೊಳಗಿನ ಗುಂಪುಗಾರಿಕೆ ಕುರಿತಂತೆ ಇವರೆಗೆ ಕರುಣಾನಿಧಿ ಅವರು ತಮ್ಮ ಮೌನ ಮುರಿದಿಲ್ಲ ಎಂದು ಮೂಲಗಳು ಹೇಳಿವೆ.
ಸಾಲ್ಟಿನ್ ಅವರ ಹಿರಿಯ ಸಹೋದರ ಅಳಗಿರಿ ಅವರನ್ನು ಅಶಿಸ್ತಿನ ಆರೋಪದ ಮೇಲೆ ಇತ್ತೀಚಿಗಷ್ಟೇ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಸಾಲ್ಟಿನ್ ಅವರ ಈ ವರ್ತನೆ ಕುರಿತಂತೆ ಅಳಗಿರಿಯವರು ಇದೊಂದು `ನಾಟಕ'ವಷ್ಟೇ ಎಂದು ಹೇಳಿದ್ದಾರೆ.