ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ `ಆತ್ಮಹತ್ಯಾ ಬಾಂಬರ್~ ಧನುವಿಗೆ ತನಿಖಾ ಸಂಸ್ಥೆಯ ಯಶಸ್ವಿ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿರುವುದಾಗಿ ಸಿಬಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುವ ಮೂಲಕ ಮಹಾನ್ ಪ್ರಮಾದ ಎಸಗಿರುವುದು ಬೆಳಕಿಗೆ ಬಂದಿದೆ.
1991ರ ಮೇ 21ರಂದು ಶ್ರೀಪೆರಂಬುದೂರ್ನಲ್ಲಿ ಈ ಕಾಂಗ್ರೆಸ್ ನಾಯಕನನ್ನು ಹತ್ಯೆ ಮಾಡಿದ ಕ್ಷಣವೇ, ಎಲ್ಟಿಟಿಯಿಂದ ನಿಯೋಜನೆಗೊಂಡಿದ್ದ ಹಂತಕಿ ಧನು ಅಲಿಯಾಸ್ ತೆನ್ಮೋಜಿ ರಾಜರತ್ನಂ, ತನ್ನನ್ನು ಸ್ಫೋಟಿಸಿಕೊಂಡು ಸತ್ತು 20 ವರ್ಷಗಳು ಕಳೆದಿದ್ದರೂ, ಸಿಬಿಐ ತನ್ನ ವೆಬ್ಸೈಟ್ನಲ್ಲಿ ಈ ತಪ್ಪು ಮಾಹಿತಿ ಪ್ರಕಟಿಸಿದೆ.
ಇದರೊಂದಿಗೆ ಈ ವೆಬ್ಸೈಟ್ನ ಮುಖಪುಟದಲ್ಲಿ ರಾಜೀವ್ ಹತ್ಯೆ ವಿಷಯ ಮಾತ್ರ ಪ್ರಮುಖವಾಗಿ ಕಾಣಿಸಿದ್ದು, ಇದು ಸಿಬಿಐ ಪ್ರಮಾದವನ್ನು ಇನ್ನಷ್ಟು ಬಯಲುಮಾಡಿದೆ.