ಬಾಗಲಕೋಟೆ: ಶ್ರೀಕ್ಷೇತ್ರ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ಪ್ರಥಮ `ಬಸವ ಕೃಷಿ~ ಪ್ರಶಸ್ತಿಯನ್ನು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಜಲ ಸಂಪನ್ಮೂಲ ತಜ್ಞ ರಾಜಸ್ತಾನದ (ಜೈಪುರ) ರಾಜೇಂದ್ರ ಸಿಂಗ್ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ದ್ವಿತೀಯ `ಬಸವ ಸಂಕ್ರಾಂತಿ~ ಕಾರ್ಯಕ್ರಮದಲ್ಲಿ ರೂ.25 ಸಾವಿರ ನಗದು, ತಾಮ್ರದ ಫಲಕ ಮತ್ತು ಸ್ವರ್ಣ ಫಲಕಗಳನ್ನು ಒಳಗೊಂಡ ಪ್ರಶಸ್ತಿಯನ್ನು ಬಸವಜಯ ಮೃತ್ಯುಂಜಯ ಮಹಾಸ್ವಾಮಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಸಿಂಗ್ ಅವರು ಗಣಿಕಾರಿಕೆ, ಕಾರ್ಖಾನೆಗಳ ಮಾಲಿನ್ಯದಿಂದಾಗಿ ಕರ್ನಾಟಕದ ಜೀವನದಿಗಳು ಅಪಾಯಕ್ಕೆ ಸಿಲುಕಿದ್ದು, ನದಿಗಳ ರಕ್ಷಣೆ ಉದ್ದೇಶದಿಂದ ರಾಜ್ಯ ಸರ್ಕಾರ ನೂತನ ನದಿ ನೀತಿಯನ್ನು ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದರು.
ಓಡುವ ನೀರನ್ನು ನಡೆಯುವಂತೆ ಮಾಡಬೇಕು, ನಡೆಯುವ ನೀರನ್ನು ನಿಲ್ಲುವಂತೆ ಮಾಡಬೇಕು, ನಿಲ್ಲುವ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು, ಆಗ ಮಾತ್ರ ದೇಶದ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ ಎಂದರು. ಬಳಿಕ ರೈತರೊಂದಿಗೆ ಸಂವಾದ ನಡೆಸಿದರು.