ಕಡೂರು: ನೂರಾರು ಹಗರಣ, ಹತ್ತಾರು ಮಂತ್ರಿಗಳ ಜೈಲುಪಾಲು, ಅನೇಕ ಶಾಸಕರು ವಿವಿಧ ಹಗರಣಗಳಲ್ಲಿ ಗುರುತಿಸಿಕೊಂಡಿರುವ ಇಂತಹ ಸರ್ಕಾರವನ್ನು ರಾಜ್ಯದಲ್ಲಿ ಇದು ವರೆಗೂ ಜನತೆ ಕಂಡಿಲ್ಲ. ಇದು ಭಂಡ ಬಿಜೆಪಿ ಸರ್ಕಾರ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ ದತ್ತ ಲೇವಡಿ ಮಾಡಿದರು.
ತಾಲ್ಲೂಕಿನ ಯಗಟಿಪುರ ಸಮೀಪ ಬರಹಳ್ಳ ಬ್ಯಾರೇಜು ಕಳೆದ ವಾರ ಬಿದ್ದ ಮಳೆಗೆ ತುಂಬಿದ ಪ್ರಯುಕ್ತ ದಂಪತಿ ಗಳೊಂದಿಗೆ ಶನಿವಾರ ತೆರಳಿ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿ ಸಾರ್ವಜನಿ ಕರನ್ನು ಉದ್ದೇಶಿಸಿ ಮಾತನಾಡಿದರು.
`ವಿಧಾನಪರಿಷತ್ ಸದಸ್ಯನಾಗಿದ್ದ ಅವಧಿಯಲ್ಲಿ 61 ಲಕ್ಷ ರೂಗಳ ಅನು ದಾನದಲ್ಲಿ ಬ್ಯಾರೇಜು ನಿರ್ಮಾಣಕ್ಕೆ ಹಣ ನೀಡಿದ್ದು, ಕಾಮಗಾರಿ ಪೂರ್ಣ ಗೊಂಡಿದ್ದು, ತುಂಬಿರುವುದರಿಂದ ಸುತ್ತಮುತ್ತಲಿನ ರೈತರು ಸಂತಸ ವ್ಯಕ್ತಪಡಿಸಿ ಬಾಗಿನ ಅರ್ಪಿಸಿದ್ದೇವೆ~ ಎಂದರು.
`ಹೆಬ್ಬೆಯೋಜನೆ ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಅವಿರತ ಹೋರಾಟದಿಂದ ಆರಂಭವಾಗಿ ನನ್ನ ಸದಸ್ಯತ್ವದ ಅವಧಿಯಲ್ಲೂ ಅನೇಕ ಬಾರಿ ಹೆಬ್ಬೆ ಯೋಜನೆಯನ್ನು ಪ್ರಸ್ತಾ ಪಿಸಿ ಬರಪೀಡಿತ ತಾಲ್ಲೂಕಿನ ನೀರಾ ವರಿಗೆ ಶ್ರಮಿಸಿದ್ದೇನೆ~ ಎಂದರು.
ತಾಲ್ಲೂಕಿನ ಇತರೆ ಯಾವುದೇ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪಕ್ಷಭೇದ ಮರೆತು ಹೋರಾಟ ಮಾಡ ಬೇಕು. ಇದರಲ್ಲಿ ರಾಜಕೀಯ ಬೆರೆಸು ವುದು ಸರಿಯಲ್ಲ ಎಂದು ಕರೆ ಅವರು ನೀಡಿದರು. ಮಂಜುನಾಥ್ ಪ್ರಸನ್ನ, ಡಿ. ಪ್ರಶಾಂತ್, ಸೀಗೆಹಡ್ಲು ಹರೀಶ್, ಕೋಡಿಹಳ್ಳಿ ಮಹೇಶ್, ಗಂಗಾಧರ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ, ಯಗಟಿಪುರ ಪ್ರಸನ್ನ, ಚಂದ್ರಶೇಖರ್, ಡಾ.ಸುಮಾ ಉಮೇಶ್, ಬಾಬಣ್ಣ ಹಾಗೂ ನೂರಾರು ಕಾರ್ಯಕರ್ತರು ಇದ್ದರು.