ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ನಾಯಕತ್ವ ಕಳೆದುಕೊಳ್ಳಲಿರುವ ಶಿವಮೊಗ್ಗ ಜಿಲ್ಲೆ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ:  ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದ ಶಿವಮೊಗ್ಗ ಜಿಲ್ಲೆ ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ಆ ಸ್ಥಾನವನ್ನು ಕಳೆದುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ನಾಲ್ವರು ಮುಖ್ಯಮಂತ್ರಿಗಳು ಮತ್ತು ಆಡಳಿತಾರೂಢ ಪಕ್ಷಕ್ಕೆ ಸಿಂಹಸ್ವಪ್ನರಾಗಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರನ್ನು ರಾಜ್ಯಕ್ಕೆ ನೀಡಿದ ಶಿವಮೊಗ್ಗ ಜಿಲ್ಲೆಯು ರಾಜಕೀಯ ನಾಯಕತ್ವದ ಓಟದಲ್ಲಿ ಸದಾ ಪೈಪೋಟಿ ಕೊಡುತ್ತ ಬಂದಿದೆ.

ಕಾಗೋಡು ಸತ್ಯಾಗ್ರಹ ಮತ್ತು ರೈತ ಚಳವಳಿಯ ಹಿನ್ನೆಲೆಯಿಂದಾಗಿ ರಾಜಕೀಯವಾಗಿ ಜಾಗೃತವಾಗಿದ್ದ ಜಿಲ್ಲೆಯೂ ಹೌದು. ಈ ವಿಶೇಷಣಗಳನ್ನೆಲ್ಲ ಹೊಂದಿದ್ದ ಜಿಲ್ಲೆಯ ರಾಜಕೀಯ ಭವಿಷ್ಯ ಇದೇ ಮೊದಲ ಬಾರಿ ಮಂಕಾಗಿಹೋಗುವ ಭೀತಿ ಎದುರಿಸುತ್ತಿದೆ.
ಮೂರು ಬಾರಿ ಶಾಸಕರಾಗಿದ್ದ ಗೋಪಾಲಗೌಡರ ಕೈಯಲ್ಲಿ ಅಧಿಕಾರ ಇಲ್ಲದೆ ಇದ್ದರೂ ಸಮಾಜವಾದಿ ಚಳವಳಿಯ ಮೂಲಕ ಅವರು ಇಡೀ ರಾಜ್ಯದ ಮನೆಮಾತಾಗಿದ್ದರು. ಅವರ ನಂತರದ ದಿನಗಳಲ್ಲಿ ರಾಜಕೀಯ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ಕಾಗೋಡು ತಿಮ್ಮಪ್ಪ ಮೊದಲಾದವರು ಅದೇ ಚಳವಳಿಯ ಉತ್ಪನ್ನಗಳು.

ಕಡಿದಾಳು ಮಂಜಪ್ಪನವರು ಕಿರು ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಪ್ರಾಮಾಣಿಕ ಜೀವನದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾದವರು. ಅದರ ನಂತರ ಪ್ರಾರಂಭವಾಗಿದ್ದು ಸಾರೆಕೊಪ್ಪ ಬಂಗಾರಪ್ಪ ಎಂಬ ಬಿರುಗಾಳಿ ನಾಯಕನ ಶಕೆ. ಅವರ ರಾಜಕೀಯ ಅವಸಾನದೊಂದಿಗೆ ಮೂಡಿ ಬಂದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಇವರಿಬ್ಬರ ನಡುವೆ ಕಾಣಿಸಿಕೊಂಡ ಜೆ.ಎಚ್. ಪಟೇಲ್ ಜನತಾ ಪರಿವಾರದ ಪ್ರಮುಖ ನಾಯಕರಾಗಿ ಕೊನೆಗೆ ಮುಖ್ಯಮಂತ್ರಿಯೂ ಆದವರು. ಈಗ ಉಳಿದಿರುವವರು ಬಿ.ಎಸ್. ಯಡಿಯೂರಪ್ಪ ಮಾತ್ರ. ಇವರು `ಮಾಡು ಇಲ್ಲವೆ ಮಡಿ' ಎನ್ನುವಷ್ಟು ನಿರ್ಣಾಯಕವಾದ ಚುನಾವಣಾ ರಣರಂಗದ ಮಧ್ಯದಲ್ಲಿದ್ದಾರೆ.

ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ. ಕಿರುವಯಸ್ಸಿಗೆ ಶಾಸಕರಾಗಿ ನಂತರ ಸಚಿವರೂ ಆಗಿಬಿಟ್ಟ ಬಂಗಾರಪ್ಪ 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಗಳ ಕಣ್ಮಣಿಯಾಗಿದ್ದರು. ಕ್ರಾಂತಿರಂಗದ ನೇತೃತ್ವ ವಹಿಸಿ ರಾಜ್ಯದ ಮೊದಲ ಕಾಂಗ್ರೆಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದರೂ ಪರಿಸ್ಥಿತಿಯ ಪಿತೂರಿಯಿಂದಾಗಿ ಮುಖ್ಯಮಂತ್ರಿಯಾಗಲು ಮಾತ್ರ ಆಗ ಸಾಧ್ಯವಾಗಿರಲಿಲ್ಲ. ಆ ಚುನಾವಣಾ ಕಾಲದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ ಬಂಗಾರಪ್ಪ ತಮ್ಮ ಸ್ವಂತ ಕ್ಷೇತ್ರ ಸೊರಬಕ್ಕೆ ಭೇಟಿ ನೀಡದೆ ಗೆದ್ದವರು.

ತಮ್ಮ ಪ್ರಚಾರದ ಅಂಗವಾಗಿ ಮನೆಮನೆಗೂ ಕಳುಹಿಸಿಕೊಟ್ಟ ಕಪ್ಪುಕನ್ನಡ ಮತ್ತು ಕಪ್ಪು ಅಂಗಿ ಧರಿಸಿದ್ದ ಅವರ ಭಾವಚಿತ್ರ ಸೊರಬದ ಹಲವಾರು ಮನೆಗಳ ದೇವರ ಪೋಟೊಗಳ ಸ್ಟ್ಯಾಂಡ್‌ನಲ್ಲಿ ಈಗಲೂ ಇವೆ. ನಂತರದ ದಿನಗಳಲ್ಲಿ ಭ್ರಷ್ಟಾಚಾರದ ಆರೋಪ, ಬಂಡಾಯ, ಪಕ್ಷಾಂತರಗಳು ಅವರ ರಾಜಕೀಯ ಜೀವನದ ಭಾಗವೇ ಆಗಿಹೋಯಿತು. ಮುಖ್ಯಮಂತ್ರಿಯಾಗಿ, ಸಚಿವರಾಗಿ ಅವರು ಅಧಿಕಾರ ಅನುಭವಿಸಿದ್ದು ಕಡಿಮೆ ಅವಧಿಗೆ ಆಗಿದ್ದರೂ ಬಂಗಾರಪ್ಪನವರ ಹೆಸರು ಗೊತ್ತಿಲ್ಲದವರು ರಾಜ್ಯದಲ್ಲಿ ಇರಲಾರರು. ಕೊನೆಯವರೆಗೂ ರಾಜಕೀಯವಾಗಿ ತಮ್ಮನ್ನು ಕಡೆಗಣಿಸಲಾಗದ ರೀತಿಯಲ್ಲಿ ಅವರು ಬದುಕಿದವರು. ಅವರ ರಾಜಕೀಯ ಜೀವನದ ಅಂತ್ಯ ಸೋಲುಗಳಲ್ಲಿ ಕೊನೆಗೊಂಡರೂ ಬದುಕಿದ್ದರೆ ಮತ್ತೆ ಈ ಬಾರಿ ಚುನಾವಣೆಯ ಕಣದಲ್ಲಿರುತ್ತಿದ್ದರೇನೋ?

ಛಲದಂಕಮಲ್ಲ: ಸ್ವಂತ ಊರು ಶಿವಮೊಗ್ಗ ಅಲ್ಲದೆ ಇದ್ದರೂ ಮನೆ ಅಳಿಯನಾಗಿ ಬಂದು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿ ರಾಜ್ಯದ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದ ಬಿ.ಎಸ್.ಯಡಿಯೂರಪ್ಪ ಅವರು ಬಂಗಾರಪ್ಪನವರ ರೀತಿಯಲ್ಲಿಯೇ ಛಲದಂಕಮಲ್ಲ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ  ಅಧಿಕಾರಕ್ಕೆ ತಂದವರೆಂಬ ಹೆಗ್ಗಳಿಕೆಗೂ ಪಾತ್ರರಾದವರು. ರಾಜಕೀಯ ಹೋರಾಟ, ಗೆಲುವಿನ ಸಾಧನೆ, ಭ್ರಷ್ಟಾಚಾರದ ಆರೋಪ, ಬಂಡಾಯದ ಬೆದರಿಕೆ, ಪಕ್ಷಾಂತರ ಹೀಗೆ ಇವರು ಸದಾ ಸುದ್ದಿಯ ಬೆಳಕಲ್ಲಿದ್ದವರು. 

ಯಡಿಯೂರಪ್ಪನವರು ಭವಿಷ್ಯದ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯಬೇಕಾದರೆ ಶಿವಮೊಗ್ಗ ಜಿಲ್ಲೆಯನ್ನು ಅವರು ಗೆಲ್ಲಬೇಕು. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ಶಿಕಾರಿಪುರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಕರ್ನಾಟಕ ಜನತಾ ಪಕ್ಷದ (ಕೆಜೆಪಿ)  ಅಭ್ಯರ್ಥಿಗಳು ಯಾರೂ ಕಾಣುತ್ತಿಲ್ಲ. ಶಿಕಾರಿಪುರದಲ್ಲಿಯೂ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಅವರಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ.

ಮೂರು ದಶಕಗಳಲ್ಲಿ ಶಿವಮೊಗ್ಗ ಮೂಲದ ಈ ಇಬ್ಬರು ನಾಯಕರು ರಾಜ್ಯ ರಾಜಕಾರಣವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಿಯಂತ್ರಿಸುತ್ತಾ ಬಂದಿದ್ದಾರೆ. ಎಂಬತ್ತರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಬಂಗಾರಪ್ಪನವರ ಬೆಂಬಲಿಗರು ಆರಿಸಿ ಬರುತ್ತಿದ್ದರೆ, ಎರಡು ಸಾವಿರದ ದಶಕದಲ್ಲಿ ಯಡಿಯೂರಪ್ಪನವರ ಬೆಂಬಲಿಗರು ಜಿಲ್ಲೆಯ ಬಹುತೇಕ ಸ್ಥಾನಗಳನ್ನು ಗೆದ್ದಿದ್ದರು. ಈ ಇಬ್ಬರು ನಾಯಕರಿಗೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯುವಂತಹ ಶಕ್ತಿ ನೀಡಿದ್ದು ತವರು ಜಿಲ್ಲೆಯಲ್ಲಿ ಮಾಡಿದ್ದ ಸಾಧನೆ.

ಇತ್ತೀಚಿನ ಈ ಇಬ್ಬರು ಹಿರಿಯ ನಾಯಕರ  ರೀತಿಯಲ್ಲಿಯೇ ರಾಜ್ಯಕ್ಕೆ ನಾಯಕತ್ವ ನೀಡಬಲ್ಲ ಇನ್ನೊಬ್ಬ ನಾಯಕ ಸದ್ಯ ಜಿಲ್ಲೆಯಲ್ಲಿರುವ ಯಾವ ರಾಜಕೀಯ ಪಕ್ಷದಲ್ಲಿಯೂ ಕಾಣುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಹಿರಿತಲೆ -ಕಾಗೋಡು ತಿಮ್ಮಪ್ಪ ಮಾತ್ರ. ಗೆಲುವಿನ ಮೂಲಕ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕೆಂಬ ಆಸೆ ಇಟ್ಟುಕೊಂಡಂತಿರುವ ಇವರಲ್ಲಿ ಹೆಚ್ಚಿನ ಮಹತ್ವಾಕಾಂಕ್ಷೆ ಇಲ್ಲ.

82 ವರ್ಷ ವಯಸ್ಸಿನ ಈ ಹಿರಿಯನಲ್ಲಿ ಅಂತಹ ಚೈತನ್ಯವೂ ಉಳಿದ ಹಾಗಿಲ್ಲ. ಸಾಗರದ ಮಾಲ್ವೆ ಎಂಬ ಊರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಗೋಡು ಅಲ್ಲಿ ಸೇರಿದ್ದ ಬೆಂಬಲಿಗರನ್ನು ಎದುರಿಗೆ ಕರೆದು `ಇವರೆಲ್ಲ ಹಳೆಯ ತಲೆಮಾರಿನವರು, ಅದರ ನಂತರದವರು ಇವರು, ಇವರ ನಂತರ ಈ ಮಕ್ಕಳು' ಎಂದು ವರ್ಗವಿಂಗಡಣೆ ಮಾಡಿ ನಮಗೆ ಪರಿಚಯಿಸಿದರು.

ಮೊದಲ ತಲೆಮಾರಿನ ಹಿರಿಯರ ಮಾತು ಮತ್ತು ಬಾಗಿದ ತಲೆಗಳು ಈಗಲೂ ನಾಯಕನ ಬಗ್ಗೆ ಪ್ರೀತಿ-ಗೌರವವನ್ನು ಸೂಚಿಸುವಂತಿತ್ತು. ಹಳೆಯ ನೆನೆಪುಗಳೇ ಇಲ್ಲದ ಯುವಕರಲ್ಲಿ ಒಂದು ಬಗೆಯ ನಿರಾಸಕ್ತಿ, ಉಳಿದಂತೆ ಮಕ್ಕಳು ಸೇರಿರುವುದು ಹಂಚುವ ಚಾಕಲೇಟ್‌ಗಳಿಗಾಗಿ ಮಾತ್ರ.

ಚಳವಳಿ ಪ್ರೇರಿತ ರಾಜಕೀಯದ ಮೂಲಕ ಬಂದ ಕಾಗೋಡು ತಿಮ್ಮಪ್ಪನವರಂತಹವರು  ತಮ್ಮ ಸಂಬಂಧಿ ಬೇಳೂರು ಗೋಪಾಲಕೃಷ್ಣ ಎಂಬ ಗಣಿಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ ಅಭ್ಯರ್ಥಿ ಎದುರು ಕಳೆದೆರಡು ಚುನಾವಣೆಗಳನ್ನು ಸೋತಿರುವುದು ಶಿವಮೊಗ್ಗ ಜಿಲ್ಲೆಯ ರಾಜಕೀಯ ಸಾಗುತ್ತಿರುವ ಹಾದಿ  ತೋರಿಸುವಂತಿದೆ. ಇದು ತಿಮ್ಮಪ್ಪನವರು ಪರಿಚಯಿಸಿದ  ಮೂರು ತಲೆಮಾರುಗಳ ಪ್ರತಿಕ್ರಿಯೆಗಳಿಂದಲೂ ಸ್ಪಷ್ಟವಾಗುತ್ತದೆ.

ಬಿಜೆಪಿಯಲ್ಲಿರುವ ಕೆ.ಎಸ್.ಈಶ್ವರಪ್ಪ ತನ್ನ ಗೆಲುವಿಗಾಗಿಯೇ ಏದುಸಿರುಬಿಡುತ್ತಿದ್ದಾರೆ. ಇನ್ನು ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷದ ನಾಯಕರಾಗುವುದು ಅಷ್ಟರಲ್ಲಿಯೇ ಇದೆ. ಬಂಗಾರಪ್ಪನವರ ಇಬ್ಬರು ಮಕ್ಕಳಾದ ಕುಮಾರ್ ಮತ್ತು ಮಧು ಚುನಾವಣಾ ಕಣದಲ್ಲಿದ್ದರೂ ಮನೆಯೊಳಗಿನ ಜಗಳದಿಂದಾಗಿ ಪರಸ್ಪರ ಕಾದಾಡುತ್ತ ತಮ್ಮ ರಾಜಕೀಯ ಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಂಗಾರಪ್ಪನವರ ಶಿಷ್ಯರಾಗಿದ್ದ ಎಚ್. ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಗೆದ್ದರೆ ಸಾಕೆನಿಸಿದೆ.

ಇದೇ ರೀತಿ ಯಡಿಯೂರಪ್ಪನವರ ಮಗ ರಾಘವೇಂದ್ರ ರಾಜಕೀಯ ಪ್ರವೇಶದ ಪ್ರಾರಂಭದ ಹಂತದಲ್ಲಿಯೇ ಭ್ರಷ್ಟಾಚಾರ, ಪಕ್ಷಾಂತರದ ಆರೋಪಗಳನ್ನು ಹೊತ್ತುಕೊಂಡಿದ್ದಾರೆ. ಇವರಲ್ಲಿ ಯಾರೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯಬಲ್ಲರೆಂಬ ನಿರೀಕ್ಷೆಯನ್ನು ಹುಟ್ಟಿಸುವುದಿಲ್ಲ. ಅಂತಹ ಮಹತ್ವಾಕಾಂಕ್ಷೆಯೂ ಅವರಲ್ಲಿದ್ದ ಹಾಗೆ ಕಾಣುವುದಿಲ್ಲ.

ರಾಜ್ಯ ರಾಜಕೀಯದಲ್ಲಿ ಶಿವಮೊಗ್ಗ ಜಿಲ್ಲೆಯ ಪತಾಕೆ ಎತ್ತಿಹಿಡಿಯುವ ಸಾಮರ್ಥ್ಯ ಈಗಲೂ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ 1994ರ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಎದುರಿಸಿದ ಬಂಗಾರಪ್ಪನವರು ಅಧಿಕಾರ ಗಳಿಸುವಷ್ಟು ಸ್ಥಾನಗಳನ್ನು ಗಳಿಸದೆ ಇದ್ದರೂ ಕಾಂಗ್ರೆಸ್ ಪಕ್ಷದ ಪರಾಭವಕ್ಕೆ ಕಾರಣವಾಗಿದ್ದರು. ಯಡಿಯೂರಪ್ಪನವರೂ ಅದೇ ಹಾದಿಯಲ್ಲಿದ್ದಾರೆ.

ಬಂಗಾರಪ್ಪನವರಂತೆ ಗೆದ್ದು ಅಧಿಕಾರಕ್ಕೆ ಬರುವಂತಹ ಶಕ್ತಿ ಯಡಿಯೂರಪ್ಪನವರಿಗೂ ಈಗ ಇಲ್ಲದೆ ಇದ್ದರೂ ಬಿಜೆಪಿಯ ಸೋಲಿಗೆ ಕಾರಣವಾಗಬಲ್ಲರು. ಬಿಜೆಪಿ ವಿರುದ್ಧ ದ್ವೇಷ ಸಾಧನೆಗೆ ಒಳಗಿಂದೊಳಗೆ ತಹತಹಿಸುತ್ತಿರುವ ಯಡಿಯೂರಪ್ಪ ಇದಕ್ಕಾಗಿ ಕಾಂಗ್ರೆಸ್ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಿಂದ ಸಿಡಿದುಹೋದ ನಂತರ ಬಂಗಾರಪ್ಪನವರು ಮತ್ತೆ ತಮ್ಮ ರಾಜಕೀಯ ಜೀವನದ ವೈಭವವನ್ನು ಮರಳಿ ಪಡೆಯಲಾಗಿಲ್ಲ. ತಂತಿಮೇಲೆ ನಡೆಯುತ್ತಿರುವ ಯಡಿಯೂರಪ್ಪನವರು ಅದೇ ಅಪಾಯವನ್ನು ಎದುರಿಸುತ್ತಿದ್ದಾರೆ. ಜಾರಿಬಿದ್ದರೆ ಶಿವಮೊಗ್ಗ ಜಿಲ್ಲೆಯನ್ನು ಕಟ್ಟಿಕೊಂಡೇ ಕೆಳಗೆ ಬೀಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT