ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್‌

ಜಯಾ ಪ್ರಕರಣದಲ್ಲಿ ಎಸ್‌ಪಿಪಿ ನೇಮಕ ವಿವಾದ
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ­ದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ನೇಮ­ಕದ ಸುತ್ತ ಎದ್ದಿರುವ ವಿವಾದಕ್ಕೆ ಸಂಬಂಧಿಸಿ ತನ್ನ ಸೂಚನೆ­ಯನ್ನು ತಪ್ಪಾಗಿ  ಆದೇಶವೆಂದು ಅರ್ಥೈಸಿ ಕರ್ನಾಟಕ ಸರ್ಕಾರ ಹೊರಡಿಸಿ­ರುವ ಅಧಿಸೂಚನೆಗೆ  ಸುಪ್ರೀಂಕೋರ್ಟ್ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಭವಾನಿ ಸಿಂಗ್‌ ಅವರನ್ನು ತೆಗೆದುಹಾಕಿ­ರುವ ಕರ್ನಾಟಕ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಜಯಲಲಿತಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ­­ಗಳಾದ ಬಿ.ಎಸ್. ಚೌಹಾಣ್‌ ಮತ್ತು ಎಸ್‌.ಎ. ಬಾಬ್ಡೆ ಅವರನ್ನೊಳ­ಗೊಂಡ ಪೀಠ ಈ ವಿರೋಧ ಸೂಚಿಸಿದೆ.
‘ನಾವೆಂದೂ ನಿರ್ದೇಶನ ನೀಡಿಲ್ಲ. ಕರ್ನಾ­ಟಕ ಸರ್ಕಾರವೇ ವಕೀಲ ಜಿ. ಭವಾನಿ ಸಿಂಗ್‌ ಅವರನ್ನು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸ್ಥಾನದಿಂದ ತೆಗೆ­ದು­ಹಾಕುವ ಆದೇಶ­ವನ್ನು ಹಿಂತೆಗೆ­ದು­­ಕೊಳ್ಳುವ ಅಧಿಸೂ­ಚನೆ ಹೊರಡಿಸಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದಲ್ಲಿ ಭವಾನಿ ಸಿಂಗ್‌ ಅವರಿಗೆ ಹಾಜ­ರಾಗದಂತೆ ಸೂಚಿಸಿ ಹೊಸ ಅಧಿ­ಸೂಚನೆ ಹೊರಡಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಇನ್ನು 10 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಪೀಠ ನೋಟಿಸ್‌ ಜಾರಿಗೊಳಿಸಿದೆ. ಪ್ರಕರಣದಲ್ಲಿ ಹೊಸ ವಿಶೇಷ ಪಬ್ಲಿಕ್‌ ಪ್ರಾಸಿ­ಕ್ಯೂಟರ್‌ ನೇಮಿಸ­ದಂತೆ ಕರ್ನಾಟಕ ಸರ್ಕಾರವನ್ನು ನಿರ್ಬಂ­ಧಿಸಿ ಆ.30­ರಂದು ತಾನು ನೀಡಿದ ಆದೇಶ ಮುಂದು­ವರಿಯ­ಲಿದೆ ಎಂದೂ ನ್ಯಾಯಪೀಠ ಹೇಳಿದೆ.

ಕರ್ನಾಟಕ ಸರ್ಕಾರವು ಸೆ. 6ರಂದು ಅಟಾರ್ನಿ ಜನರಲ್‌ ಜಿ.ಇ. ವಹನ್ವತಿ ಅವರ ಮೂಲಕ ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಭವಾನಿ ಸಿಂಗ್‌ ಅವರನ್ನು ತೆಗೆದುಹಾಕುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ನ್ಯಾಯಾಲಯ­ವನ್ನು ಕೋರಿತ್ತು. ಅಲ್ಲದೆ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ­ಯವರ ಮುಂದೆ ಎಲ್ಲ ಅಗತ್ಯ ದಾಖಲೆ­ಪತ್ರಗಳನ್ನು ಸಲ್ಲಿಸಿ, ಹೊಸ ಪ್ರಾಸಿಕ್ಯೂ­ಟರ್‌ ನೇಮಿಸುವು­ದಾಗಿಯೂ ನ್ಯಾಯಾ­ಲ­ಯಕ್ಕೆ ಅದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT