ನವದೆಹಲಿ: ತಮಿಳುನಾಡು ಮನವಿ ಮಾಡಿಕೊಂಡಂತೆ ಪ್ರತಿದಿನ ಎರಡು ಟಿಎಂಸಿ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಮಂಗಳವಾರ ಸುಪ್ರೀಂಕೋರ್ಟ್ಗೆ ಕರ್ನಾಟಕ ಸರ್ಕಾರ ತಿಳಿಸಿದೆ.
ರಾಜ್ಯದ 12.75 ಲಕ್ಷ ಎಕರೆ ಜಮೀನಿಗೆ ನೀರಾವರಿ ಒದಗಿಸಲು 140 ಟಿಎಂಸಿ ನೀರಿನ ಅಗತ್ಯವಿದ್ದು, ಈಗಿನ ಹಾಗೂ ಭವಿಷ್ಯದ ನೀರಿನ ಲಭ್ಯತೆಯನ್ನು ಗಣನೆಗೆ ತೆಗೆದುಕೊಂಡರೂ ಸಂಗ್ರಹ 110 ಟಿಎಂಸಿ ಅಡಿ ಮೀರುವುದಿಲ್ಲ ಎಂದು ಹೇಳಿದೆ.
ಕಾವೇರಿ ನದಿ ನೀರು ಪ್ರಾಧಿಕಾರ (ಸಿಆರ್ಎ)ಕ್ಕೆ ಈ ಅಂದಾಜು ಇದ್ದ ಪಕ್ಷದಲ್ಲಿ ಅದು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 15ರವರೆಗೆ 9,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ಆದೇಶ ನೀಡುತ್ತಿರಲಿಲ್ಲ ಎಂದೂ ಪ್ರತಿಪಾದಿಸಿದೆ. ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯಲ್ಲಿ ರಾಜ್ಯ ತನ್ನ ವಾದ ಮಂಡಿಸಿದ್ದು, ಸಂಕಷ್ಟ ಸ್ಥಿತಿಯಲ್ಲಿ ನೀರನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ಸೂತ್ರ ಪರಿಗಣಿಸದೇ ಪ್ರಧಾನಿ ಆದೇಶಿಸಿದ್ದಾರೆ ಎಂದಿದೆ.