ನವದೆಹಲಿ (ಪಿಟಿಐ): ಈ ಸಲ 108 ಗಣ್ಯರು ಮತ್ತು ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಆದರೆ ಅತ್ಯುನ್ನತ ನಾಗರಿಕ ಗೌರವವಾದ `ಭಾರತ ರತ್ನ'ವನ್ನು ಯಾರಿಗೂ ನೀಡಿಲ್ಲ. ರಾಜ್ಯದ ವಿವಿಧ ಕ್ಷೇತ್ರಗಳ ಎಂಟು ಮಹನೀಯರು ಪುರಸ್ಕೃತರ ಪಟ್ಟಿಯಲ್ಲಿದ್ದಾರೆ. ಇವರುಗಳೆಂದರೆ- ವಿಜ್ಞಾನಿ ರೊದ್ದಂ ನರಸಿಂಹ (ಪದ್ಮವಿಭೂಷಣ), ವಿಜ್ಞಾನಿಗಳಾದ ಬಿ.ಎನ್. ಸುರೇಶ್, ಅಜಯ್ ಸೂದ್, ಕೃಷ್ಣಸ್ವಾಮಿ ವಿಜಯರಾಘವನ್ ಮತ್ತು ವಿ.ಕೆ. ಸಾರಸ್ವತ್, ಕ್ರಿಕೆಟಿಗ ರಾಹುಲ್ ದ್ರಾವಿಡ್ (ಪದ್ಮಭೂಷಣ), ಅಂಗವಿಕಲ ಕ್ರೀಡಾಪಟು ಎಚ್.ಎನ್. ಗಿರೀಶ್ ಮತ್ತು ರಂಗ ಕಲಾವಿದೆ ಬಿ. ಜಯಶ್ರೀ (ಪದ್ಮಶ್ರೀ).
ಭೌತವಿಜ್ಞಾನಿ ಯಶ್ಪಾಲ್ ಪದ್ಮ ವಿಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಹಿಂದಿ ಚಿತ್ರ ತಾರೆಗಳಾದ ದಿವಂಗತ ರಾಜೇಶ್ ಖನ್ನಾ, ಶರ್ಮಿಳಾ ಟ್ಯಾಗೋರ್, ಹೆಸರಾಂತ ಗಾಯಕಿ ಎಸ್. ಜಾನಕಿ, ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಪಕ ಡಿ. ರಾಮಾ ನಾಯ್ಡು, ಹಾಸ್ಯ ಕಲಾವಿದ ದಿ. ಜಸ್ಪಾಲ್ ಭಟ್ಟಿ, ತಮಿಳುನಾಡಿನ ಉದ್ಯಮಿ ಆರ್. ತ್ಯಾಗರಾಜನ್, ಮಹಾರಾಷ್ಟ್ರದ ವೈದ್ಯ ಡಾ. ನಂದಕಿಶೋರ್ ಲಾಡ್, ಮರಾಠಿ ಸಾಹಿತಿ ಮಂಗೇಶ್ ಪಡಗಾಂವಕರ್ ಸೇರಿ 24 ಮಂದಿಗೆ `ಪದ್ಮಭೂಷಣ' ನೀಡಿ ಗೌರವಿಸಲಾಗಿದೆ. ಹಿಂದಿ ಚಿತ್ರ ನಟ ನಾನಾ ಪಾಟೇಕರ್, ಮಲಯಾಳಂ ನಟ ಮಧು ಸೇರಿದಂತೆ 80 ಗಣ್ಯರಿಗೆ ಪದ್ಮಶ್ರೀ ದೊರೆತಿದೆ.