ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 3 ಕಡೆ ಹೊಸ ಪಶು ಆಹಾರ ಘಟಕ

Last Updated 21 ಫೆಬ್ರುವರಿ 2011, 20:25 IST
ಅಕ್ಷರ ಗಾತ್ರ

ಬೆಂಗಳೂರು: ರೈತರಿಗೆ ಪಶು ಆಹಾರ ಪೂರೈಸಲು ಶಿಕಾರಿಪುರ, ಬಿಡದಿ ಹಾಗೂ ಹಾಸನದಲ್ಲಿ ಶೀಘ್ರದಲ್ಲಿಯೇ ಪಶು ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ತಿಳಿಸಿದರು.

ನಗರದಲ್ಲಿರುವ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ‘ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಹಾಲು ಉತ್ಪಾದನೆ ಕಡಿಮೆಯಾಗಿದೆ. ಮುಖ್ಯವಾಗಿ ಪಶು ಆಹಾರದ ಕೊರತೆಯೇ ಇದಕ್ಕೆ ಕಾರಣ. ಇದನ್ನು ನೀಗಿಸಲು ರೈತರಿಗೆ ಸೂಕ್ತ ಬೆಲೆಯಲ್ಲಿ ಪಶು ಆಹಾರ ಪೂರೈಸಲು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ರಾಜ್ಯ ಸರ್ಕಾರದ ನೆರವಿನೊಂದಿಗೆ ಶಿಕಾರಿಪುರದಲ್ಲಿ 300 ಟನ್ ಸಾಮರ್ಥ್ಯದ ಘಟಕವನ್ನು ರೂ 45 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಒಂದು ವರ್ಷದೊಳಗೆ ಈ ಘಟಕ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

‘ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯಿಂದ ಸಾಲ ಪಡೆದು ಬಿಡದಿ ಹಾಗೂ ಹಾಸನ ಘಟಕಗಳನ್ನು ಸ್ಥಾಪಿಸಲಾಗುವುದು. ಸುಮಾರು ರೂ 60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 500 ಟನ್ ಸಾಮರ್ಥ್ಯದ ಬಿಡದಿ ಘಟಕವು 18 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಇದರಂತೆ ರೂ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 300 ಟನ್ ಸಾಮರ್ಥ್ಯದ ಹಾಸನ ಘಟಕವು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಅಮೂಲ್‌ಗೆ ಹಾಲು ಪೂರೈಕೆ:
‘ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವ ಗುಜರಾತ್‌ನ ಅಮೂಲ್‌ಗೆ ಕೆಎಂಎಫ್ 1,500 ಟನ್ ಬೆಣ್ಣೆ ಪೂರೈಸಿದೆ’ ಎಂದು ಪ್ರೇಮನಾಥ ಹೆಮ್ಮೆಯಿಂದ ಹೇಳಿಕೊಂಡರು.

ಉತ್ತರ ಭಾರತದಲ್ಲಿ ಹಲವೆಡೆ ಹಾಲಿನ ಕೊರತೆ ಕಂಡುಬಂದಿದೆ. ದೇಶದ ಇತರ ಹಲವು ಹಾಲಿನ ಮಹಾಮಂಡಳಿಗಳು ಕೆಎಂಎಫ್‌ನಿಂದ ಹಾಲನ್ನು ಖರೀದಿಸಿವೆ ಎಂದರು. ‘ಕಳೆದ ವರ್ಷ ಉಂಟಾದಂತೆ ಈ ವರ್ಷ ಹಾಲಿನ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ’ ಎಂದ ಅವರು, ‘ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ಬೇಸಿಗೆಯಲ್ಲಿ ಸಹಜವಾಗಿ ಹಾಲು ಉತ್ಪಾದನೆಯು ಕಡಿಮೆಯಾಗುತ್ತದೆ. ಈ ಕೊರತೆಯನ್ನು ನೀಗಿಸಲು ಕೆಎಂಎಫ್ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಹೇಳಿದರು.

ಕೆಎಂಎಫ್ ಈಗ ಪ್ರತಿದಿನ 28 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 26 ಲಕ್ಷ ಲೀಟರ್ ಹಾಲು ಮಾರಾಟವಾಗಿತ್ತು. ಈಗ 33 ಲಕ್ಷ ಲೀಟರ್ ಹಾಲು ಸಂಗ್ರಹಣೆ ಇದೆ ಎಂದರು.

ಕೇರಳಕ್ಕೆ ರಫ್ತು ಇಲ್ಲ: ‘ರಾಜ್ಯದಲ್ಲಿಯೇ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಕೇರಳಕ್ಕೆ ಹಾಲು ರಫ್ತು ಮಾಡುವುದನ್ನು ನಿಲ್ಲಿಸಲಾಗಿದೆ’  ಎಂದು ಅವರು ತಿಳಿಸಿದರು.
ತಿರುಪತಿಗೆ ತುಪ್ಪ: ‘ತಿರುಪತಿ ದೇವಸ್ಥಾನಕ್ಕೆ ಪ್ರತಿವರ್ಷ 2,500 ಟನ್ ತುಪ್ಪ ಪೂರೈಸಲಾಗುತ್ತಿದ್ದು ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಪ್ರತಿ ತಿಂಗಳು ಅಂದಾಜು 200 ಟನ್‌ಗಳಷ್ಟು ತುಪ್ಪ ಪೂರೈಸಲಾಗುತ್ತಿದೆ’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT