ಹುಬ್ಬಳ್ಳಿ/ಬೆಂಗಳೂರು: ಶಬರಿಮಲೆಯಲ್ಲಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತ ಮತ್ತು ಕಾಲ್ತುಳಿತದಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು, ಅರಸೀಕೆರೆ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆಯ ಒಟ್ಟು 33 ಮಂದಿ ಸಾವನ್ನಪ್ಪಿದ್ದಾರೆ.
ಈ ಪೈಕಿ 23 ಮಂದಿಯನ್ನು ಗುರುತಿಸಲಾಗಿದೆ. ಉಳಿದವರ ಗುರುತು ಪತ್ತೆಯಾಗಿಲ್ಲ.ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮದ ಒಬ್ಬ ಹಾಗೂ ಗೋಕಾಕ ಪಟ್ಟಣದ ಆರು ಜನ ಸೇರಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಬೆಂಗಳೂರು, ಅರಸೀಕೆರೆ, ಎಚ್.ಡಿ.ಕೋಟೆಯ ಹತ್ತುಮಂದಿ ಸತ್ತಿದ್ದಾರೆ.
ಮೃತರನ್ನು ಗೋಕಾಕ ನಗರದ ಪುರಷೋತ್ತಮ ಬಾಳಪ್ಪ ಪೂಜೇರಿ(53), ಬಸವರಾಜ ಫಕೀರಪ್ಪ ಮಿರ್ಜಿ(35), ಸಿದ್ಧರಾಮ ಮಲ್ಲಪ್ಪಾ ಮುರ್ಕಿಗಾಂವಿ (18), ಪ್ರಮೋದ ಶಿವಪುತ್ರಪ್ಪ ಉರ್ಫ್ ದೊಡ್ಡಣ್ಣ (21), ಚಂದ್ರಶೇಖರ ಲಗಮಪ್ಪ ಗುಂಡಕಲ್ಲಿ (28) ಮತ್ತು ಪ್ರಕಾಶ ಯಲ್ಲಪ್ಪ ಪೂಜೇರಿ (35) ಹಾಗೂ ಮಲ್ಲಾಪೂರ ಪಿಜಿ ಗ್ರಾಮದ ಚಂದ್ರಕಾಂತ ಭೋಸಲೆ (25) ಎಂದು ಗುರುತಿಸಲಾಗಿದೆ.ಧಾರವಾಡ ತಾಲ್ಲೂಕಿನ ಕಲ್ಲೂರು ಗ್ರಾಮದ ಮಂಜುನಾಥ ಘಂಟಿ(13), ಶಿವಲಿಂಗಯ್ಯ ಶಿವಯ್ಯ ಮುರಗೋಡಮಠ(15), ಮಹಾಬಳೇಶ್ವರ ನಿಂಗಪ್ಪ ಗುಡಗಟ್ಟಿ (27), ಮಂಜುನಾಥ ಕಡೇದ (26) ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಕೇಶ್ವಾಪೂರದ ತಳವಾರ ಓಣಿಯ ಮಂಜುನಾಥ ಕನಕಮ್ಮನವರ (27) ಕೂಡ ಶಬರಿಮಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕುಂದಗೋಳ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಶೇಖರ ಶಂಕರಪ್ಪ ಗವಣ್ಣವರ (34) ಅವರೂ ಅಯ್ಯಪ್ಪನ ಸನ್ನಿಧಿಯಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಣೆವಾಡಾದ ನಿವಾಸಿ ಮೆಹಬೂಬ್ಸಾಬ್ ಮಡ್ಡಿ(22) ಸಾವಿಗೀಡಾಗಿದ್ದಾರೆ.ಬಳ್ಳಾರಿ ಜಿಲ್ಲೆಯ ಕಾನಾಹೊಸಳ್ಳಿ ಗ್ರಾಮದ ಎನ್.ತಿಪ್ಪೇರುದ್ರಪ್ಪ(26) ಮೃತಪಟ್ಟಿದ್ದಾರೆ.
ಮೈಸೂರು ವರದಿ: ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿ ಬಸವರಾಜಪುರ ಗ್ರಾಮದ ಮಂಜುನಾಥ (32) ಶುಕ್ರವಾರ ರಾತ್ರಿ ನಡೆದ ಕಾಲ್ತುಳಿತದ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣತಾಲ್ಲೂಕಿನ ಚಿಕ್ಕಮಾಗಳಿ ಗ್ರಾಮದ ಸುರೇಶ (18) ಸಾವನ್ನಪ್ಪಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಸೋನಹಳ್ಳಿಯ ಕೃಷ್ಣ (38) ಮತ್ತು ಅವರ ಮಗ ಹರೀಶ (12) ಅವರು ಶಬರಿಮಲೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.