ಬೀದರ್: ರಾಜ್ಯದಲ್ಲಿ 1.75 ಕೋಟಿ ಜನ ಕುಡುಕರಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಚಿತ್ರನಟಿ ಶ್ರುತಿ ಅವರು ಇಲ್ಲಿ ಹೇಳಿದರು.
ವಿಶ್ವ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯು ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಮಾಯೆ ಕುರಿತ ಅರಿವಿನ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಡುಕರಿರುವುದು ಸಮೀಕ್ಷೆಯಿಂದ ಬಯಲಾಗಿದೆ. ರಾಜ್ಯದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಮದ್ಯ ವ್ಯಸನಿ ಆಗಿರುವುದು ದುಃಖದ ವಿಚಾರ ಎಂದರು.ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಒಂದೇ ವರ್ಷದಲ್ಲಿ 35 ಸಾವಿರ ಜನರನ್ನು ಕುಡಿತದ ಚಟದಿಂದ ಬಿಡಿಸಿದ್ದಾರೆ ಎಂದು ನುಡಿದರು.
`ಮಾದಕ ವಸ್ತುಗಳ ಸೇವನೆಯಿಂದ ವೈಯಕ್ತಿಕ ಹಾನಿಯ ಜೊತೆಗೆ ಸಮಾಜದ ಸ್ವಾಸ್ಥ್ಯವೂ ಹದಗೆಡುತ್ತದೆ. ನಾವು ಪಾಶ್ಚಿಮಾತ್ಯರ ಒಳ್ಳೆಯ ಗುಣಗಳನ್ನು ಮಾತ್ರ ಅನುಸರಿಸೋಣ, ಕೆಟ್ಟ ಅಭ್ಯಾಸಗಳನ್ನಲ್ಲ~ ಎಂದು ಮತ್ತೊಬ್ಬ ನಟಿ ಸುಧಾರಾಣಿ ತಿಳಿಸಿದರು.
`ಮಾದಕ ವಸ್ತುಗಳನ್ನು ಬಳಸುವುದೆಂದರೆ ನಮ್ಮನ್ನು ನಾವು ಕೊಂದುಕೊಂಡಂತೆ~ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆಯೂ ಆಗಿರುವ ನಟಿ ತಾರಾ ಹೇಳಿದರು.ಮಾದಕ ವಸ್ತುಗಳ ನಿಯಂತ್ರಣ ಕಾರ್ಯದಲ್ಲಿ ಸಮಾಜದ ಎಲ್ಲ ವರ್ಗದವರು ಕೈಜೋಡಿಸಬೇಕು ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.