ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಳೆ, ನೆರೆಯ ರಾಜ್ಯಕ್ಕೆ ನೀರು

Last Updated 4 ಮೇ 2012, 6:05 IST
ಅಕ್ಷರ ಗಾತ್ರ

ಮುಳಬಾಗಲು: ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ ಉಗಮವಾಗುವ ಕೌಂಡಿನ್ಯ ನದಿ ನೀರು ಮಳೆಗಾಲದಲ್ಲಿ ಆಂಧ್ರಪ್ರದೇಶಕ್ಕೆ ಹರಿದು ಹೋಗುವುದು ಒಂದು ಕಡೆಯಾದರೆ, ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಮಳೆ ನೀರು ಆಂಧ್ರಪದೇಶಕ್ಕೆ ಹರಿದು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಳೆಗಾಲದಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ನೀರು ಸಂಗ್ರಹವಾಗದೆ ತಾಲ್ಲೂಕಿನ ಗೋಕುಂಟಿ ಗ್ರಾಮದ ಹೊಸಕೆರೆ ಮೂಲಕ ಆಂಧ್ರಪದೇಶದ ಪುಂಗನೂರು ಪಟ್ಟಣದ ಕೆರೆ ಸೇರುತ್ತಿದೆ.ತಾಲ್ಲೂಕಿನ ಎಚ್.ಗೊಲ್ಲಹಳ್ಳಿ, ಬಿಸ್ಸನಹಳ್ಳಿ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲ ಸುಮಾರು ಹತ್ತು ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನೀರು, ತಗ್ಗು ಪ್ರದೇಶವಾದ ತಾಲ್ಲೂಕಿನ ಗೋಕುಂಟಿ ಹೊಸಕೆರೆಗೆ ಅತ್ಯಲ್ಪ ಕಾಲದಲ್ಲಿ ಹರಿದು ಬರುತ್ತದೆ.

ನಂತರ ಹೆಚ್ಚುವರಿ ನೀರು ಆಂಧ್ರಪ್ರದೇಶದ ಗ್ರಾಮಗಳಾದ ಕನಗಾನಿ, ಸೀತರಗಂಗಪಲ್ಲಿ, ಚೊಕ್ಕಂಡ್ಲಪಲ್ಲಿ, ಬಿಕ್ಕಮಾನಪಲ್ಲಿ, ಗುಂಡ್ಲಪಲ್ಲಿ ಮುಂತಾದ ಗ್ರಾಮಗಳ ಮೂಲಕ ಪುಂಗನೂರು ಕೆರೆ ಸೇರುತ್ತದೆ.  ಅಲ್ಲಿ ಮಳೆ ಬೀಳದಿದ್ದರೂ ತಾಲ್ಲೂಕಿನ ಗೋಕುಂಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಬಿದ್ದರೆ ಸಾಕು ಅನಾಯಾಸವಾಗಿ ಕೆರೆ ತುಂಬಿ ಅಂತರ್ಜಲ ವೃದ್ಧಿಯಾಗುತ್ತಿದೆ. 

ನಾಲ್ಕು ದಿನಗಳ ಹಿಂದೆ ಬಿದ್ದ ಮಳೆ ನೀರು ತಗ್ಗು ಪ್ರದೇಶವಾದ ನೆರೆ ರಾಜ್ಯದ ಗ್ರಾಮಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎನ್ನುತ್ತಾರೆ ಗೋಕುಂಟಿ ಗ್ರಾಮದ ಅಮರನಾರಾಯಣಪ್ಪ.ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ, ಒಂದು ಸಾವಿರ ಅಡಿ ಆಳ ಕೊರೆದರೂ ಕುಡಿಯುವ ನೀರು ದೊರೆಯುತ್ತಿಲ್ಲ. ಇಂತಹ ಸಮಯದಲ್ಲಿ ಕನಿಷ್ಠ ಪ್ರಮಾಣದ ನೀರನ್ನಾದರೂ ಶೇಖರಿಸಲು ಸಂಬಂಧಪಟ್ಟ ಇಲಾಖೆ ಮನಸ್ಸು ಮಾಡಿದರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಅದೇ ಗ್ರಾಮದ ಗಂಗುಲಪ್ಪ.

ಮಳೆ ನೀರು ನಮ್ಮ ರೈತರಿಗೆ ಸದುಪಯೋಗ ಆಗಬೇಕು, ನಂತರ ಹೆಚ್ಚುವರಿ ನೀರನ್ನು ಹಿಡಿ ದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂಬುದು ವೆಂಕಟಾಚಲಪತಿ ಅವರ ಅನಿಸಿಕೆ.ಮಳೆ ನೀರು ಇಲ್ಲಿಯೇ ಸಂಗ್ರಹವಾದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ.
 
ಗೋಕುಂಟಿ ಗ್ರಾಮದ ಹೊಸಕೆರೆ ತುಂಬಿ ನೆರೆ ರಾಜ್ಯಕ್ಕೆ ಹರಿದು ಹೋಗುತ್ತಿರುವುದನ್ನು ಇಲ್ಲಿನ ಜನತೆ ಹಲವಾರು ವರ್ಷಗಳಿಂದ ಅಸಹಾಯಕರಾಗಿ ಗಮನಿಸುತ್ತ ಬಂದಿದ್ದಾರೆ. ಹೊಸಕೆರೆಯಲ್ಲಿ ಹೂಳೆತ್ತಿದರೂ ಸಾಕಷ್ಟು ನೀರು ಸಂಗ್ರಹವಾಗುತ್ತದೆ ಎಂಬುದು ಸುತ್ತಮುತ್ತಲ ಗ್ರಾಮಸ್ಥರ ಅಭಿಪ್ರಾಯ.                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT