ಮಂಗಳೂರು:ಮೈಸೂರು,ಹುಬ್ಬಳ್ಳಿ-ಧಾರವಾಡ ಹಾಗೂ ಮಂಗಳೂರಿನಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಸ್.ಜಾಮ್ದಾರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಈಗ ಬೆಂಗಳೂರಿನಲ್ಲಿ ಮಾತ್ರ ಸೈಬರ್ ಅಪರಾಧದ ಪೊಲೀಸ್ ಠಾಣೆ ಇದೆ. ಹಾಗಾಗಿ ಮತ್ತೆ ಮೂರು ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ.ಕೇಂದ್ರ ಸರ್ಕಾರದಿಂದ 15ದಿನಗಳ ಹಿಂದೆ ಮಾರ್ಗಸೂಚಿ ಬಂದಿದೆ ಎಂದರು.
ಭಯೋತ್ಪಾದನೆ ಚಟುವಟಿಕೆಗಳನ್ನು ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ.ಈ ಬಗ್ಗೆ ಐದು ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.ಕರಾವಳಿಯ ಮೂರು ಜಿಲ್ಲೆಗಳಲ್ಲಿ ಈಗ ಕರಾವಳಿ ಕಾವಲು ಪಡೆಯ ಐದು ಠಾಣೆಗಳಿವೆ. ಗಂಗೊಳ್ಳಿ, ಕಾರವಾರ, ತದಡಿ ಸೇರಿ ನಾಲ್ಕು ಕಡೆ ಕರಾವಳಿ ಕಾವಲು ಪಡೆಯ ಠಾಣೆಗಳನ್ನು ಸ್ಥಾಪಿಸಲಾಗುವುದು.ಪ್ರತಿ ಠಾಣೆಗೆ ಮೂರು ವಿಚಕ್ಷಣಾ ದೋಣಿಗಳನ್ನು ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.