ಬೀಜಿಂಗ್ (ಪಿಟಿಐ): ಕರ್ನಾಟಕದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ರಾಜಕೀಯ ಪ್ರೇರಿತರಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಮೊಕದ್ದಮೆ ದಾಖಲು ಮಾಡಲು ಅನುಮತಿ ನೀಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಶನಿವಾರ ಇಲ್ಲಿ ಆಪಾದಿಸಿದರು.‘ಮುಖ್ಯಮಂತ್ರಿಯವರು ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆಸಿಲ್ಲ’ ಎಂದರು.
“ಕಾನೂನು ಪ್ರಕಾರ ಭೂಮಿಯ ‘ಡಿನೋಟಿಫಿಕೇಷನ್’ ಆದೇಶ ಹೊರಡಿಸುವುದು, ಮುಖ್ಯಮಂತ್ರಿಯವರ ವಿಶೇಷ ಅಧಿಕಾರವಾಗಿದ್ದು, ಹಿಂದಿನ ಮುಖ್ಯಮಂತ್ರಿಗಳು ಕೂಡಾ ಆ ರೀತಿ ಮಾಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ.
ಯಡಿಯೂರಪ್ಪನವರಿಗಿಂತ ಮುಂಚೆ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ, ಧರ್ಮಸಿಂಗ್, ಎಸ್.ಎಂ. ಕೃಷ್ಣ ಅವರೂ ಅನೇಕ ಸಲ ಈ ಅಧಿಕಾರವನ್ನು ಬಳಸಿದ್ದಾರೆ ಎಂದ ಅವರು, ‘ಪುತ್ರನಿಗೆ ಅನುಕೂಲ ಕಲ್ಪಿಸಲು ಯಡಿಯೂರಪ್ಪನವರು ‘ಡಿನೋಟಿಫಿಕೇಷನ್’ ಮಾಡಿರುವುದು ಮಾತ್ರ ಅನೈತಿಕ ಮತ್ತು ಯೋಗ್ಯವಲ್ಲ. ಇದು ಕಾನೂನಿನಡಿ ಸರಿ ಎನಿಸಿದರೂ, ನೈತಿಕತೆಯ ಆಧಾರದಲ್ಲಿ ಸರಿಯಲ್ಲ ಎಂಬುದು ಬಿಜೆಪಿ ಮತ್ತು ತಮ್ಮ ವೈಯಕ್ತಿಕ ನಿಲುವು ಸಹ ಆಗಿದೆ ಎಂದರು.