ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ; ಫೈನಲ್‌ಗೆ ಪ್ರಕಾಶ್, ಸಿದ್ಧಾರ್ಥ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಬಾಗಲಕೋಟೆ ಜಿಲ್ಲೆಯ ಮುಧೋಳದ ಇಬ್ಬರು ಪೈಲ್ವಾನರಾದ ಪ್ರಕಾಶ್ ಯರಗಟ್ಟಿ ಮತ್ತು ಸಿದ್ಧಾರ್ಥ ಮಾನೆ ಅವರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯ ಪ್ರತಿಷ್ಠಿತ `ದಸರಾ ಕಂಠೀರವ~ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ದಸರಾ ಮಹೋತ್ಸವದ ಅಂಗವಾಗಿ ದೊಡ್ಡಕೆರೆ ಮೈದಾನದ ಡಿ. ದೇವರಾಜ್ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಗುರುವಾರ ನಡೆದ 74 ಕೆಜಿ ಮೇಲ್ಪಟ್ಟವರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದ ಪ್ರಕಾಶ್ ಮತ್ತು ಸಿದ್ಧಾರ್ಥ ಫೈನಲ್ ಪ್ರವೇಶಿಸಿದ್ದಾರೆ.

ಮೊದಲ ಸೆಮಿಫೈನಲ್‌ನಲ್ಲಿ ಪ್ರಕಾಶ ಯರಗಟ್ಟಿ ಅವರು ದಾವಣಗೆರೆ ಎಸ್‌ಆರ್‌ಎಲ್ ಶೆಟ್ಟಿಯವರನ್ನು ಅಂಕಗಳ ಆಧಾರದಲ್ಲಿ ಪರಾಭವಗೊಳಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಆಕರ್ಷಕ ಪಟ್ಟುಗಳನ್ನು ಹಾಕಿದ ಸಿದ್ಧಾರ್ಥ ಮಾನೆ ದಾವಣಗೆರೆಯ ಎಂ.ವೈ. ಪಾಟೀಲ ಮೇಲೆ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದರು.

ವೆಂಕಟೇಶ್ ಬಸಪ್ಪಗೆ ಜಯ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ವೆಂಕಟೇಶ ಪಾಟೀಲ ಮತ್ತು ಬೆಳಗಾವಿ ಜಿಲ್ಲೆಯ ಅಥಣಿಯ ಪಾಂಡುರಂಗ ದಸರಾ ಕೇಸರಿ ವಿಭಾಗದ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯಗಳಲ್ಲಿ ವೆಂಕಟೇಶ್ ಪಾಟೀಲ, ಬಾಗಲಕೋಟೆಯ ಬಸಪ್ಪ ಮಮದಾಪುರ್ ಅವರನ್ನು ಮಣಿಸಿದರೆ, ಪಾಂಡುರಂಗ, ದಾವಣಗೆರೆ ಕ್ರೀಡಾ ಶಾಲೆಯ ಕಾರ್ತಿಕ್ ಮೇಲೆ ಗೆದ್ದರು.

ವಿಠಲ್, ನಾಗರಾಜ್ ಫೈನಲ್‌ಗೆ: ಬೆಂಗಳೂರಿನ ಎಂಇಜಿ ತಂಡದ ವಿಠಲ್ ಅಮ್ಮನಗೋಳ ಮತ್ತು ಧಾರವಾಡದ ಕ್ರೀಡಾ ವಸತಿ ನಿಲಯದ ಎಂ. ನಾಗರಾಜ್ ದಸರಾ ಕುಮಾರ್ ಸುತ್ತಿನ ಫೈನಲ್ ಪ್ರವೇಶಿಸಿದರು.

60ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಎಂಇಜಿಯ ವಿಠಲ್ ಅಮ್ಮನಗೋಳ ಧಾರವಾಡದ ಗಣೇಶ್ ಮೇಲೆ ಗೆದ್ದರು. ಇನ್ನೊಂದರಲ್ಲಿ ಧಾರವಾಡದ ಎಂ. ನಾಗರಾಜ್ ಅವರು ಬಾಗಲಕೋಟೆಯ ಸಿದ್ದು ಹೊಸಮನಿ ಅವರನ್ನು ಸೋಲಿಸಿ ಅಂತಿಮ ಸುತ್ತಿಗೆ ಸಾಗಿದರು.

66 ಕೆಜಿ ವಿಭಾಗದದಲ್ಲಿ ಬೆಳಗಾವಿಯ ಶಿವಾಜಿ ಹರ್ಡೇಕರ್ ಅವರು, ತಮ್ಮ ಊರಿನವರೇ ಆದ ಪ್ರಸಾದ ಅಷ್ಟಗಿ ಮೇಲೆ ಹಾಗೂ ದಾವಣಗೆರೆ ಶಿವಾನಂದ ಅಮ್ಮಣಗಿಯವರು ಬೆಳಗಾವಿಯ ನಿಶಾಂತ್ ಪಾಟೀಲರನ್ನು ಸೋಲಿಸಿ ಅಂತಿಮ ಸುತ್ತಿಗೆ ಸಾಗಿದರು. 

55 ಕೆಜಿ ವಿಭಾಗದ ಬಾಲಕರ ಸೆಮಿಫೈನಲ್‌ಗಳಲ್ಲಿ ದಾವಣಗೆರೆಯ ಕೆಂಚಪ್ಪ ಬೆಳಗಾವಿಯ ಸರದಾರ್ ಮುಲ್ತಾನಿ ಮೇಲೂ, ಬಾಗಲಕೋಟೆಯ ಎಂ.ಎಲ್. ಧೋಂಡೆ, ಬೆಂಗಳೂರಿನ ಶರೀಫ್ ಜಮಾದಾರ್ ಮೇಲೂ ಗೆದ್ದು ಫೈನಲ್ ತಲುಪಿದ್ದಾರೆ. 

 ಪ್ರೇಮಾಗೆ ಪ್ರಶಸ್ತಿ: ಅಂತರರಾಷ್ಟ್ರೀಯ ಕುಸ್ತಿಪಟು ಗದಗಿನ ಪ್ರೇಮಾ ಹುಚ್ಚಣ್ಣವರ ಗುರುವಾರ ದಸರಾ ಉತ್ಸವದ ಅಂಗವಾಗಿ ಆರಂಭವಾದ ರಾಜ್ಯಮಟ್ಟದ  ಕುಸ್ತಿ ಸ್ಪರ್ಧೆಯ  44 ಕೆಜಿ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.  ಫೈನಲ್ ಪಂದ್ಯದಲ್ಲಿ ಗದಗಿನ ಮೈತ್ರಾ ಅವರನ್ನು ಚಿತ್ ಮಾಡಿದ ಪ್ರೇಮಾ ನಿರಾಯಸ ಗೆಲುವು ಸಾಧಿಸಿದರು. 

ಫಲಿತಾಂಶ: 67ಕೆಜಿ: ಸ್ಮಿತಾ ಪಾಟೀಲ (ಬೆಳಗಾವಿ)-1, ರೀಟಾ ಪ್ರಿಯಾಂಕ (ಮೈಸೂರು)-2, ಅನುಶ್ರೀ (ಆಳ್ವಾಸ್)-3, ಅರ್ಪಿತಾ (ಬೆಂಗಳೂರು)-3; 63ಕೆಜಿ: ಆತ್ಮಶ್ರೀ (ಆಳ್ವಾಸ್)-1, ಸಂಗೀತಾ (ಮಂಡ್ಯ)-2, ಜ್ಯೋತಿ (ಮಂಡ್ಯ)-3; 55ಕೆಜಿ: ರಂಜಿತಾ (ಆಳ್ವಾಸ್ ಮೂಡಬಿದರೆ)-1, ಜ್ಯೋತಿ (ಗದಗ)-2, ಅಪರ್ಣಾ ಸಿದ್ಧಿ (ಹಳಿಯಾಳ)-3; 51ಕೆಜಿ: ಶಾಹಿದಾ (ಗದಗ)-1, ಶಶಿಕಲಾ (ಗದಗ)-2, ಅನುಷಾ (ಮಂಡ್ಯ)-3, ಕಾವ್ಯಾ (ಆಳ್ವಾಸ್, ಮೂಡಬಿದರೆ)-3;  48ಕೆಜಿ: ಬಶೀರಾ (ಗದಗ)-1, ಶ್ವೇತಾ (ಗದಗ)-2, ಮೇಘನಾ (ಮಂಡ್ಯ)-3, ಸಾಯಿರಾಬಾನು (ಗದಗ)-3

44ಕೆಜಿ ವಿಭಾಗ: ಪ್ರೇಮಾ ಹುಚ್ಚಣ್ಣನವರ (ಗದಗ)-1, ಮೈತ್ರಾ (ಗದಗ)-2, ಮಮತಾ ಎಂ. ಕೆಲೋಜಿ (ಕ್ರೀಡಾ ಶಾಲೆ, ಹಳಿಯಾಳ)-3, ಸುರಭಿ ಗೋವಿಂದ (ಮಂಡ್ಯ)-3.
ರಾಷ್ಟ್ರಮಟ್ಟದ ಕುಸ್ತಿ ಇಂದಿನಿಂದ: ದಸರಾ ಮಹೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳಾ ಕುಸ್ತಿ ಸ್ಪರ್ಧೆಗಳು ಶುಕ್ರವಾರದಿಂದ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT