ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಸಮೀಪದ ಸಾಯಿ ಸಿಟಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಐದು ಬಹುಮಾನಗಳನ್ನು ಗೆಲ್ಲುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರತಿಮಾ ನಾಟಕ ಮತ್ತು ಮಹಿಳಾ ಸಂಘ ಹಾಗೂ ಮಂದಹಾಸ ಸಾಂಸ್ಕೃತಿಕ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ವಿವಿಧ ವಿಭಾಗಗಳಲ್ಲಿ ಇವರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಕಿರಿಯರ ವಿಭಾಗದಲ್ಲಿ ಪ್ರಾಚಿ, ಚೌಧರಿ ಮತ್ತು ಕ್ರಿಸ್ತೀನಾ ನೇತೃತ್ವದ ತಂಡ, ಭೂಮಿಕಾ, ಸಿಂಧುಶ್ರೀ, ಹರ್ಷಿತ ನೇತೃತ್ವದ ತಂಡ ಹಾಗೂ ಹಿರಿಯರ ವಿಭಾಗದಲ್ಲಿ ಶಾಲೆಯ ಶಿಕ್ಷಕಿಯರೇ ಪಾಲ್ಗೊಂಡಿದ್ದ ನವಿಲು ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.
ಚಲನಚಿತ್ರ ಗೀತೆಗಳ ನೃತ್ಯ ಸ್ಪರ್ಧೆಯಲ್ಲಿ ಎರಡು ಬಹುಮಾನಗಳನ್ನು ಗಳಿಸಿದ್ದು ಒಟ್ಟು ಐದು ಬಹುಮಾನಗಳನ್ನು ಪಡೆದರು.
ಸಂಸ್ಥೆಯ ಆಡಳಿತ ಮಂಡಳಿಯ ಕೇಶವ ರೆಡ್ಡಿ ಅವರು ಸಮಗ್ರ ಪ್ರಶಸ್ತಿಯನ್ನು ಶಾಲೆಯ ಪರವಾಗಿ ಪಡೆದುಕೊಂಡರು.
ಪಂಚಮುಖಿ ನೃತ್ಯ ಸಂಸ್ಥೆಯ ಡಿ.ವಿ.ಶ್ರೆನಿವಾಸ್ ನೃತ್ಯ ನಿರ್ದೇಶನ ಮಾಡಿದ್ದರು. ಶ್ರೀನಿವಾಸ್ ಅವರಿಗೆ ರಣಧೀರ ಕಂಠೀರವ ಡಾ.ರಾಜ್ಕುಮಾರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.