ಗದಗ: ಹಿರಿಯ ರಂಗಭೂಮಿ ಕಲಾವಿದೆ ಎಚ್. ಫ್ಲೊರಿನಾ ಬಾಯಿ ಅವರಿಗೆ 2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು.
ನಗರದ ಶಹಪುರಪೇಟೆಯ ಫ್ಲೊರಿನಾ ನಿವಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಭೇಟಿ ನೀಡಿ ಶಾಲು ಹೊದಿಸಿ, ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ರೂಪಾಯಿ ಚೆಕ್ ನೀಡಿ ಗೌರವಿಸಿದರು.
‘ನನ್ನಂತೆ ನೂರಾರು ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನೀವು ಕಲಾವಿದೆ ಆಗಿರುವುದರಿಂದ ಅವರ ಸಮಸ್ಯೆ ಗೊತ್ತು. ಅಂತಹವರಿಗೆ ಸಹಾಯ ಮಾಡಿ’ ಎಂದು ಫ್ಲೊರಿನಾ ಕಣ್ಣೀರಿಟ್ಟರು.
ಫ್ಲೊರಿನಾ ಅವರನ್ನು ಸಮಾಧಾನ ಪಡಿಸಿದ ಸಚಿವೆ, ಸರ್ಕಾರದಿಂದ ದೊರಕುತ್ತಿರುವ ಸೌಲಭ್ಯದ ಬಗ್ಗೆ ಅವರ ಪತಿ ಕೆ.ಎಚ್.ಲಕ್ಕುಂಡಿ ಅವರಿಂದ ಮಾಹಿತಿ ಪಡೆದರು.
ಉಮಾಶ್ರೀ ಅವರ ಜತೆ ಯಾವುದಾದರೂ ನಾಟಕದಲ್ಲಿ ನಟಿಸಿದ್ದೀರಾ ಎಂದು ಸಚಿವ ಎಚ್.ಕೆ.ಪಾಟೀಲ ಪ್ರಶ್ನಿಸಿದಾಗ, ಬಸ್ ಕಂಡಕ್ಟರ್ ನಾಟಕದಲ್ಲಿ ನಟಿಸಿದ್ದೇನೆ ಎಂದು ಫ್ಲೊರಿನಾ ಉತ್ತರಿಸಿದರು. ‘ನನ್ನ ಕಾಲು ಚೆನ್ನಾಗಿದ್ದರೆ ಉಮಾಶ್ರೀ ಅವರ ಜತೆ ಈಗಲೂ ನಾಟಕದಲ್ಲಿ ನಟಿಸುತ್ತಿದೆ’ ಎಂದು ಫ್ಲೊರಿನಾ ಹಾಸ್ಯ ಚಟಾಕಿ ಹಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಶ್ರೀ, ಫ್ಲೊರಿನಾ ಅವರ ವೈದ್ಯಕೀಯ ವೆಚ್ಚ ರೂ1.15 ಲಕ್ಷವನ್ನು ಸರ್ಕಾರ ಭರಿಸಲಿದೆ ಎಂದರು. ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ, ನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ.ತುರಮರಿ ಅವರು ಹಾಜರಿದ್ದರು.