ನವದೆಹಲಿ (ಪಿಟಿಐ): ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ರಾಡಿಯಾ ಟೇಪ್ ಗಳನ್ನು ತಿದ್ದಲಾಗಿದೆ ಎಂಬ ಮಹತ್ವದ ಮಾಹಿತಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ಗೆ ನೀಡಿದ ಕೇಂದ್ರ ಸರ್ಕಾರ ~ಟೇಪ್ ಸೋರಿಕೆಗೆ ಸರ್ಕಾರಿ ಸಂಸ್ಥೆಗಳು ಹೊಣೆಯಲ್ಲ~ ಎಂದು ಪ್ರತಿಪಾದಿಸಿತು.
ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ನೇತೃತ್ವದ ಪೀಠಕ್ಕೆ ಮೊಹರು ಮಾಡಲಾದ ಲಕೋಟೆಯಲ್ಲಿ ~ರಹಸ್ಯ ವರದಿಯನ್ನು~ ಸಲ್ಲಿಸಿದ ಸರ್ಕಾರ, ಹಿಂದಿನ ಕಾರ್ಪೋರೇಟ್ ದಲ್ಲಾಳಿ ನೀರಾ ರಾಡಿಯಾ ಅವರ ವಿವಾದಿತ ದೂರವಾಣಿ ಸಂಭಾಷಣೆಯಲ್ಲಿ ನಡೆದ ಹಸ್ತಕ್ಷೇಪದಲ್ಲಿ ಸೇವಾ ಸಂಸ್ಥೆಗಳು ಸೇರಿದಂತೆ ಎಂಟರಿಂದ ಹತ್ತು ಸಂಸ್ಥೆಗಳು ಸೇರಿವೆ ಎಂದು ಪ್ರತಿಪಾದಿಸಿತು.
ಮಾಧ್ಯಮಗಳು ಬಿಡುಗಡೆ ಮಾಡಿದ ಟೇಪ್ ಗಳನ್ನು ತಿದ್ದಲಾದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ ರಹಸ್ಯ ವರದಿಯ ಕೆಲವು ಆರಂಭಿಕ ಪುಟಗಳನ್ನು ಪೀಠವು ಪರಿಶೀಲಿಸಿತು.
ಮೂಲ ಟೇಪ್ ಜೊತೆಗೆ ಪ್ರಸಾರ ಮಾಡಲಾದ ಟೇಪ್ ಗಳ ಆರಂಭ ಮತ್ತು ಕೊನೆಯ ಸಂಭಾಷಣೆಗಳು ತಾಳೆಯಾಗುವುದಿಲ್ಲ ಎಂದು ವರದಿ ಹೇಳಿರುವುದಾಗಿ ನ್ಯಾಯಮೂರ್ತಿ ಸಿಂಘ್ವಿ ಅವರು ವರದಿಯನ್ನು ಉಲ್ಲೇಖಿಸುತ್ತಾ ನುಡಿದರು.
ಪ್ರಕರಣದ ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಟೇಪ್ ನ್ನು ಯಾರು ಸೋರಿಕೆ ಮಾಡಿದರು ಎಂಬುದು ಗೊತ್ತಿಲ್ಲ ಎಂದೂ ವರದಿ ಹೇಳುತ್ತದೆ ಎಂದು ನ್ಯಾಯಮೂರ್ತಿ ತಿಳಿಸಿದರು. ~ಬೇರೆ ಯಾರಾದರೂ ಇದನ್ನು ಮಾಡಿರುವ ಸಾಧ್ಯತೆ ಇದೆ~ ಎಂದು ಪೀಠ ಹೇಳಿತು.