ಷಿಕಾಗೊ (ಪಿಟಿಐ): ತಹಾವುರ್ ರಾಣಾನ ವಿಚಾರಣೆಯು ಭಯೋತ್ಪಾದಕತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ `ಅತ್ಯಂತ ಮಹತ್ವದ್ದಾಗಿತ್ತು~ ಎಂದು ಅಲ್ಲಿನ ಮಾಧ್ಯಮಗಳು ಶುಕ್ರವಾರ ಬಣ್ಣಿಸಿವೆ.
ಮುಂಬೈ ದಾಳಿಯ ಆರೋಪದಲ್ಲಿ ಆತ ನಿರ್ದೋಷಿಯೆಂದೂ, ಎಲ್ಇಟಿ ಉಗ್ರರಿಗೆ ನೆರವು ನೀಡಿದ್ದ ಮತ್ತು ಡೆನ್ಮಾರ್ಕ್ನಲ್ಲಿ ಪತ್ರಿಕೆ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಸಂಚಿನಲ್ಲಿ ಆತ ತಪ್ಪಿತಸ್ಥನೆಂದೂ ನೀಡಿರುವ ತೀರ್ಪಿನ ಬಗ್ಗೆ ವ್ಯಾಪಕ ಪ್ರಚಾರವನ್ನೂ ನೀಡಿವೆ.
2008ರ ಮುಂಬೈ ದಾಳಿಯ ಆರೋಪಿ ಡೇವಿಡ್ಹೆಡ್ಲಿಗೆ ನೆರವು ನೀಡಿದ್ದ `ಅತಿ ಗಂಭೀರವಾದ ಆರೋಪದಿಂದ~ 50 ವರ್ಷದ ರಾಣಾನನ್ನು ಮುಕ್ತಗೊಳಿಸಲಾಗಿದೆ ಎಂದು ವರಿದಗಳು ಹೇಳಿವೆ.
`ಐಎಸ್ಐನೊಂದಿಗೆ ಸಂಚುಕೋರರ ಸಂಪರ್ಕದ ಬಗ್ಗೆ ಹೆಡ್ಲಿಯ ಸಾಕ್ಷ್ಯ ಹೇಳಿಕೆಯನ್ನೂ ರಾಣಾನ ವಿಚಾರಣೆ ಒಳಗೊಂಡಿತ್ತು. ಇದು ಉಗ್ರರಿಗೆ ಸಂಬಂಧಿಸಿದಂತೆ ಹಿಂದೆಂದೂ ಕಂಡಿರದಂತಹ ಮಹತ್ವದ ವಿಚಾರಣೆ ಆಗಿತ್ತು~ ಎಂದು `ಷಿಕಾಗೊ ಟ್ರಿಬ್ಯೂನ್~ ಹೇಳಿದೆ.
ಮುಂಬೈ ಮೇಲೆ ನಡೆದ 26/11 ದಾಳಿಯನ್ನು `ಭಾರತದ ಮೇಲಿನ 9/11 ದಾಳಿ~ ಎಂದು ಮತ್ತೊಂದು ಪತ್ರಿಕೆ ಷಿಕಾಗೊ ಸನ್ ಟೈಮ್ಸ ವರ್ಣಿಸಿದೆ.
ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಮಂದಿ ಬಲಿಯಾಗಿದ್ದ ಮುಂಬೈ ದಾಳಿಯಲ್ಲಿ ರಾಣಾನನ್ನು ನಿರ್ದೋಷಿಯೆಂದು ಜಿಲ್ಲಾ ನ್ಯಾಯಾಧೀಶ ಹ್ಯಾಡಿ ಡಿ. ಲಿನೆನ್ವೆಬೆರ್ ಅವರು ಪ್ರಕಟಿಸುತ್ತಿದ್ದಂತೆಯೇ ರಾಣಾನ ಪತ್ನಿ ಮತ್ತು ಕುಟುಂಬದ ಮೌನ ರೋದನದೊಂದಿಗೆ ಗುಂಪು ಗೂಡಿದರು.