ಚಿಕ್ಕಬಳ್ಳಾಪುರ: ‘ನಮ್ಮೂರು ಜಿಲ್ಲಾ ಕೇಂದ್ರ ಆಗಿರುವುದರಲ್ಲಿ ಎರಡು ಮಾತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ಗಳಿವೆ. ಕೆಲ ದಿನಗಳ ಹಿಂದೆಯಷ್ಟೇ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಸಂಚರಿಸಲು ನಗರ ಸಾರಿಗೆ ಬಸ್ ಸೇವೆಯೂ ಆರಂಭಗೊಂಡಿದೆ.
ರೈಲ್ವೆ ನಿಲ್ದಾಣವೂ ಎಲ್ಲ ಸೌಕರ್ಯಗಳನ್ನು ಒಳಗೊಂಡು ಅಭಿವೃದ್ಧಿಯೂ ಆಗಿದೆ. ಆದರೆ ಹೋಟೆಲ್, ಉಪಾಹಾರ ಮತ್ತು ಊಟದ ವಿಷಯದಲ್ಲಿ ಮಾತ್ರ ನಮ್ಮೂರಿನಲ್ಲಿ ಅವಾಗವಾಗ ಸ್ವಲ್ಪ ತೊಂದರೆಯಾಗುತ್ತೆ. ಹೊಟ್ಟೆ ತುಂಬಾ ಊಟ ಮಾಡಲೂ ಆಗದೇ ತಳ್ಳುಗಾಡಿಗಳಲ್ಲಿ ಸಿಗುವ ಆಹಾರದಿಂದಲೇ ಸಮಾಧಾನಪಟ್ಟಿಕೊಳ್ಳಬೇಕಾಗುತ್ತದೆ’
ಹೀಗೆ ಹೇಳಿದವರು ಚಿತ್ರದುರ್ಗದ ಮೂಲನಿವಾಸಿಯಾದ ಬಸವರಾಜು. ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಅವರು ಹೀಗೆ ಹೇಳಲು ಹಲವಾರು ಕಾರಣಗಳಿವೆ. ಅವರ ಮಾತಿನಲ್ಲಿ ಹೇಳುವುದಾದರೆ, ‘ನಗರದಲ್ಲಿ ನಿಷೇಧಾಜ್ಞೆ ಘೋಷಣೆಯಾಗಿದೆ ಎಂಬಂತೆ ಸಂಜೆ 7 ರಿಂದ 8 ಗಂಟೆಯೊಳಗೆ ಬಹುತೇಕ ಹೋಟೆಲ್ಗಳು ಬಂದ್ ಆಗುತ್ತವೆ. ರಾತ್ರಿ 9 ಗಂಟೆ ಸುಮಾರಿಗೆ ಊರೆಲ್ಲ ಸುತ್ತಾಡಿದರೂ ಒಳ್ಳೆಯ ಊಟ ಎಲ್ಲಿಯೂ ಸಿಗುವುದಿಲ್ಲ. ಬೇರೆ ದಾರಿಗಾಣದೇ ತಳ್ಳುಗಾಡಿಗಳಲ್ಲಿ ಸಿಗುವ ಇಡ್ಲಿ, ಪುರಿ, ರೈಸ್ಬಾತ್ನಿಂದಲೇ ಸ್ವಲ್ಪ ಹೊಟ್ಟೆ ತುಂಬಿಸಿಕೊಂಡು ಮಲಗಬೇಕಾಗುತ್ತದೆ’.
ನಗರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಹೋಟೆಲ್ಗಳಿದ್ದು, ಅವುಗಳಲ್ಲಿ ಮಾಂಸಾಹಾರ ಪೂರೈಸುವ ಮಿಲ್ಟ್ರಿ ಹೋಟೆಲ್ಗಳ ಸಂಖ್ಯೆಯೇ ಹೆಚ್ಚು. ಬಹುತೇಕ ಹೋಟೆಲ್ಗಳು ಸಂಜೆ 7 ರಿಂದ 8 ಗಂಟೆಯೊಳಗೆ ಮುಚ್ಚಲ್ಪಟ್ಟರೆ, ಬಹುತೇಕ ಮಂದಿ ತಳ್ಳುಗಾಡಿಗಳನ್ನೇ ಅವಲಂಬಿಸುತ್ತಾರೆ. ನಗರದ ಬಾಲಾಜಿ ಚಿತ್ರಮಂದಿರ, ವಾಣಿ ಚಿತ್ರಮಂದಿರ ಮತ್ತು ಕೆನರಾ ಬ್ಯಾಂಕ್ ಬಳಿ ನಿಲುಗಡೆಯಾಗುವ ತಳ್ಳುಗಾಡಿಗಳ ಬಳಿಯಂತೂ ಜನದಟ್ಟಣೆಯೇ ನೆರೆದಿರುತ್ತದೆ. ರಾತ್ರಿ 9 ರಿಂದ 11 ಗಂಟೆಯವರೆಗೆ ಜನರು ಅಲ್ಲಿಯೇ ಆಹಾರ ಸೇವಿಸಿದರೆ, ಇನ್ನೂ ಕೆಲವರು ಮನೆಗಳಿಗೆ ಪಾರ್ಸಲ್ಗಳನ್ನು ಕಟ್ಟಿಕೊಂಡು ಹೋಗುತ್ತಾರೆ.
‘ಬೇರೆ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಲ್ಲಿ ಚಿಕ್ಕ ಮತ್ತು ದೊಡ್ಡ ಹೋಟೆಲ್ಗಳು ರಾತ್ರಿ ಕನಿಷ್ಠ 10 ಗಂಟೆಯವರೆಗೆಯಾದರೂ ತೆರೆದಿರುತ್ತವೆ. ಊಟಕ್ಕೆ ಗ್ರಾಹಕರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೋಟೆಲ್ನವರು ಇರುತ್ತಾರೆ. ಆದರೆ ನಮ್ಮೂರಿನ ಸ್ಥಿತಿಯೇ ಭಿನ್ನ. ರಾತ್ರಿ 8ರ ಸುಮಾರಿಗೆ ಹೋದರೆ, ತಿಂಡಿ ಖಾಲಿ–ಹೋಟೆಲ್ ಬಂದ್ ಎಂಬ ಉತ್ತರ ಸಿಗುತ್ತದೆ. ಇದರಿಂದಾಗಿ ಕೆಲವರು ಮಿಲ್ಟ್ರಿ ಹೋಟೆಲ್ಗಳಿಗೆ ಹೋಗುತ್ತಾರೆಯಾದರೂ ಇನ್ನೂ ಕೆಲವರು ತಳ್ಳುಗಾಡಿಗಳನ್ನೇ ಅವಲಂಬಿಸುತ್ತಾರೆ. ಇದಕ್ಕೆ ಏನೂ ಕಾರಣವೇನು ಎಂಬುದು ಇವತ್ತಿಗೂ ಗೊತ್ತಾಗಿಲ್ಲ’ ಎಂದು ನಗರದ ನಿವಾಸಿ ನಾಗೇಶ್ ತಿಳಿಸಿದರು.
ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡುವ ತಳ್ಳುಗಾಡಿಯವರು ಬೇರೆಯದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ‘ಮೊದಲೆಲ್ಲ ನಾವು ಮೆಣಸಿನಕಾಯಿ ಬಜ್ಜಿ, ವಡೆ ಮತ್ತು ಬೊಂಡಾ ಮಾತ್ರವೇ ತಯಾರಿಸುತ್ತಿದ್ದೆವು. ಆದರೆ ರಾತ್ರಿ 8ರ ಸುಮಾರಿಗೆ ಯಾವಾಗ ಜನರಿಂದ ಬೇರೆ ಬೇರೆ ಆಹಾರದ ಬಗ್ಗೆ ಬೇಡಿಕೆ ವ್ಯಕ್ತವಾಯಿತೋ, ಆಗಿನಿಂದ ನಾವು ಬೇರೆ ಬೇರೆಯದ್ದೇ ಆಹಾರಗಳನ್ನು ಸಿದ್ಧಪಡಿಸಲು ಆರಂಭಿಸಿದೆವು. ಈಗ ಬಜ್ಜಿ, ವಡೆಯಲ್ಲದೇ ಪುರಿ, ದೋಸೆ, ಚಿತ್ರನ್ನ, ಚಪಾತಿ ಮುಂತಾದವು ಕೊಡುತ್ತೇವೆ. ಜನರು ಇಲ್ಲಿಯೇ ನಿಂತುಕೊಂಡು ಉಂಡು, ಮನೆಗೂ ಪಾರ್ಸಲ್ ಕಟ್ಟಿಕೊಂಡು ಹೋಗುತ್ತಾರೆ’ ಎಂದು ತಳ್ಳುಗಾಡಿಯವರು ಹೇಳುತ್ತಾರೆ.
‘ಜನರು ಬಯಸುವವರೆಗೆ ನಾವು ತಳ್ಳುಗಾಡಿಗಳಲ್ಲಿ ಆಹಾರ ತಯಾರಿಸಲು ಸಿದ್ಧರಿದ್ದೇವೆ. ಆದರೆ ಕೆಲ ಬಾರಿ ಪೊಲೀಸರು ಬಂದು ಎಲ್ಲವನ್ನೂ ಸ್ಥಗಿತಗೊಳಿಸುತ್ತಾರೆ. ಆಗ ಜನರು ಹಸಿದುಕೊಂಡೇ ಮನೆಗೆ ಹೋಗುತ್ತಾರೆ. ನಮ್ಮ ತಳ್ಳುಗಾಡಿಗಳಲ್ಲಿನ ಆಹಾರವನ್ನು ಯುವಜನರು ಮತ್ತು ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಸವಿಯುತ್ತಾರೆ. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಆಗದವರು, ಪರವೂರಿನವರು ಇಲ್ಲವೇ ಬೆಂಗಳೂರು ಅಥವಾ ಬೇರೆ ಬೇರೆ ಊರುಗಳಲ್ಲಿ ಕೆಲಸ ಮುಗಿಸಿಕೊಂಡು ತಡವಾಗಿ ಮರಳುವವರು ನಮ್ಮ ಆಹಾರ ಸವಿಯುತ್ತಾರೆ. ನಮ್ಮ ತಳ್ಳುಗಾಡಿ ಇರದಿದ್ದರೆ, ಅವರಿಗೆ ಇನ್ನೂ ಕಷ್ಟವಾಗಿರೋದು’ ಎಂದು ಅವರು ಹೇಳುತ್ತಾರೆ.
‘ನಾವು ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೋಟೆಲ್ ತೆರೆದಿರುತ್ತೇವೆ. ಬರುವ ಗ್ರಾಹಕರ ಸಂಖ್ಯೆಯಲ್ಲಿ ಏರಿಳಿತ ಇರುತ್ತದೆ. ಊಟಕ್ಕಿಂತ ಹೆಚ್ಚಾಗಿ ತಿಂಡಿಯನ್ನೇ ಪೂರೈಸುವ ನಮ್ಮ ಹೋಟೆಲ್ಗಳಿಗೆ ಸಂಜೆ 7ರ ನಂತರ ಗ್ರಾಹಕರು ಬರುವ ಸಂಖ್ಯೆ ಕಡಿಮೆಯಾಗತೊಡಗುತ್ತದೆ. ಅನಗತ್ಯವಾಗಿ ಹೋಟೆಲ್ ತೆರೆದು ಸಮಯ ವ್ಯಯ ಮಾಡುವುದರ ಬದಲು ಬೇಗನೇ ಬಾಗಿಲು ಹಾಕುತ್ತೇವೆ’ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ.
ಉಡುಪಿ ಹೋಟೆಲ್, ಖಾನಾವಳಿ ಇಲ್ಲ!
‘ಬಹುತೇಕ ಊರುಗಳಲ್ಲಿ ಉಡುಪಿ ಹೋಟೆಲ್ ಇಲ್ಲವೇ ಖಾನಾವಳಿಯಾದರೂ ಇದ್ದೇ ಇರುತ್ತದೆ. ಆದರೆ ನಮ್ಮೂರಿನಲ್ಲಿ ಅವೆರಡೂ ಇಲ್ಲ. ಬಹುತೇಕ ಹೋಟೆಲ್ಗಳಲ್ಲಿ ಮುದ್ದೆ ಸಿಗುತ್ತದೆಯಾದರೂ ಚಪಾತಿ ಅಥವಾ ರೊಟ್ಟಿ ಸಿಗುವುದಂತೂ ತುಂಬಾನೇ ಕಡಿಮೆ. ಚಪಾತಿ, ರೊಟ್ಟಿ ಸಿಗದಾದಾಗ ಕೆಲ ಹೋಟೆಲ್ಗಳಲ್ಲಿ ದೊರೆಯುವ ಪರೊಟಾಗೆ ಮೊರೆ ಹೋಗಬೇಕಾಗುತ್ತದೆ’ ಎಂದು ನಿವಾಸಿ ನಾಗರಾಜು ಹೇಳುತ್ತಾರೆ.
ಚಪಾತಿ, ರೊಟ್ಟಿ ಸವಿಯುವ ಜನರು ನಗರದಲ್ಲಿದ್ದಾರೆ. ಆದರೆ ಅವುಗಳನ್ನು ಉಣಬಡಿಸುವ ಹೋಟೆಲ್ಗಳು ತುಂಬಾನೇ ಕಡಿಮೆ ಇವೆ. ಒಂದು ವೇಳೆ ಅವುಗಳನ್ನು ಸಹ ಪೂರೈಸಿದರೆ ನಮ್ಮಂತಹವರಿಗೆ ತುಂಬ ಅನುಕೂಲವಾಗುತ್ತದೆ. ಬೇರೆ ಬೇರೆ ರುಚಿಯು ಸವಿದಂತೆ ಆಗುತ್ತದೆ’ ಎಂದು ಅವರು ತಿಳಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.