ಸಕಲೇಶಪುರ: ಮಳೆ ಹಾನಿ ಯೋಜನೆಯಲ್ಲಿ ತಾಲ್ಲೂಕಿನ ಉದೇವಾರ ಗ್ರಾ.ಪಂ. ವ್ಯಾಪ್ತಿಯ ಕೆಲಸಗುಲಿ ಗ್ರಾಮದಲ್ಲಿ ನಿರ್ಮಿಸಿದ್ದ ಕಿರು ಸೇತುವೆಯನ್ನು ರಾತ್ರೋರಾತ್ರಿ ಜೆಸಿಬಿ ಯಂತ್ರದಿಂದ ಉರುಳಿಸಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.ಕಿರು ಸೇತುವೆ ಕಾಮಗಾರಿಯನ್ನು ಜಿ.ಪಂ. ಎಂಜಿನಿಯರಿಂಗ್ ವಿಭಾಗದಿಂದ 2 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಮಾಡಲಾಗುತ್ತಿದೆ. ಫೌಂಡೇಷನ್ ಸಹ ಹಾಕದೆ ಸೇತುವೆಯ ಕಾಮಗಾರಿ ಕಳಪೆ ಆಗಿದೆ ಎಂದು ‘ಪ್ರಜಾವಾಣಿ’ ಈಚೆಗೆ ವರದಿ ಪ್ರಕಟಿಸಿತ್ತು.
ಪತ್ರಿಕೆಯ ವರದಿ ಆಧರಿಸಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಿ.ಪಂ. ಸದಸ್ಯ ಬೈರಮುಡಿ ಚಂದ್ರು, ಗ್ರಾ.ಪಂ. ಅಧ್ಯಕ್ಷ ಫೈರೋಜ್ ಮೊದಲಾದವರು ಬುಧವಾರ ಸ್ಥಳ ಪರಿಶೀಲನೆ ನಡೆಸಿ ಎಂಜಿನಿಯರ್ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಕಳಪೆ ಕಾಮಗಾರಿ ನಿರ್ವಹಿಸಿರುವ ಎಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು.
ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ಕಳಪೆ ಕಾಮಗಾರಿ ನೋಡಿ, ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಆತಂಕಗೊಂಡ ಜಿ.ಪಂ. ಎಂಜಿನಿಯರ್ಗಳೇ ಈ ಸೇತುವೆಯನ್ನು ಧ್ವಂಸ ಮಾಡಿರಬಹುದು ಎಂದು ಶಂಕಿಸಲಾಗಿದೆ.ಇದೇ ರೀತಿ ಹಲಸುಲಿಗೆ ಸಮೀಪ ಕುದುರೆ ಹಳ್ಳದ ಕಿರು ಸೇತುವೆ ಕಳಪೆ ಕಾಮಗಾರಿ ಪ್ರಕರಣದಲ್ಲಿ ಒಂದು ವಾರದ ಹಿಂದೆಯಷ್ಟೇ ಜಿ.ಪಂ. ವಿಭಾಗದ ಜೂನಿಯರ್ ಎಂಜಿನಿಯರ್ ಕೃಷ್ಣಯ್ಯ ಅವರನ್ನು ಜಿ.ಪಂ. ಸಿಇಓ ಅಂಜನ್ಕುಮಾರ್ ಅಮಾನತುಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.