ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಧಾಕೃಷ್ಣನ್‌ರ ಆದರ್ಶಗಳನ್ನು ಅಳವಡಿಸಿಕೊಳ್ಳಿಸಿ'

Last Updated 6 ಸೆಪ್ಟೆಂಬರ್ 2013, 6:49 IST
ಅಕ್ಷರ ಗಾತ್ರ

ರಾಮದುರ್ಗ: `ರಾಧಾಕೃಷ್ಣರ ಬಗ್ಗೆ ರಾಜಕಾರಣಿಗಳು ಓದಿ ತಿಳಿದುಕೊಳ್ಳುವುದಿಲ್ಲ. ಶಿಕ್ಷಕರು ಸಹ ಅವರ ತತ್ವ, ಆದರ್ಶಗಳ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಕಾಟಾಚಾರಕ್ಕೆ ರಾಧಾಕೃಷ್ಣನ್‌ರ ಜನ್ಮ ದಿನಆಚರಣೆ ಮಾಡುತ್ತಿರುವುದು ದುರದುಷ್ಟಕರ' ಎಂದು ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಸ್ಟೇಟ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡ `ತಾಲ್ಲೂಕು ಮಟ್ಟದ ಶಿಕ್ಷಕರ ದಿನೋತ್ಸವ' ಹಾಗೂ 2012-13ನೇ ಸಾಲಿನಲ್ಲಿ ಸೇವಾ ನಿವೃತ್ತರಾದ ಶಿಕ್ಷಕರ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ರಾಧಾಕೃಷ್ಣನ್ ಅವರ ಆದರ್ಶ ಮತ್ತು ತತ್ವಗಳನ್ನು ಶಿಕ್ಷಕರು ಜೀವನದಲ್ಲಿ ಅಳವಡಿಸಿಕೊಂಡರೆ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಮೇಳ್ಳಿಕೇರಿ ಮಾತನಾಡಿ, ಶಿಕ್ಷಕರು ಸರಿಯಾದ ಶಿಕ್ಷಣ ನೀಡಲು ಕೊಠಡಿಗಳ ದುಃಸ್ಥಿತಿಯನ್ನು ಸುಧಾರಿಸಲು ಜನನಾಯಕರು, ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಶಿಕ್ಷಕರು ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.

ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ತದ್ಯುಕ್ತಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಾಬಾಯಿ ಬೊಮ್ಮನ್ನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಮಳಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರತ್ನಾ ಯಾದವಾಡ, ಜಯಶ್ರೀ ಪಾರಶೆಟ್ಟಿ  ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಸ್ವಾಗತಿಸಿದರು. ಆರ್.ಸಿ. ರಾಠೋಡ ಕಾರ್ಯಕ್ರಮ ನಿರೂಪಿಸಿದರು. 

ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕ: ಮಾಮನಿ
ಸವದತ್ತಿ:
`ಒಬ್ಬ ಸಮರ್ಥ ಶಿಕ್ಷಕ ಆದರ್ಶ ಪ್ರಜೆಗಳನ್ನು ತಯಾರಿಸಿ ದೇಶಕ್ಕೆ ಕೊಡುವ ಮೂಲಕ ಸುಂದರ ಸಮಾಜ ನಿರ್ಮಿಸುವುದರೊಂದಿಗೆ ರಾಷ್ಟ್ರ ರಕ್ಷಕನಾಗುವನು' ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ `ಶಿಕ್ಷಕರ ದಿನಾಚರಣೆ' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಆಡಳಿತ ನಡೆಸುವ ಪ್ರತಿಯೊಬ್ಬ ರಾಜಕಾರಣಿಗಳನ್ನು ತಯಾರಿಸಿದ ಗುರುಗಳು  ರಾಜಕೀಯ ರಂಗದಲ್ಲಿ ಯೋಗ್ಯ ನಾಯಕರಾಗಿ ಉನ್ನತ ಸ್ಥಾನ ಗಳಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ದೇಶದ ಕೊನೆಯ ಗ್ರಾಮದ ಬಡ ವಿದ್ಯಾರ್ಥಿಗಳಿಗೂ ಗುಣ ಮಟ್ಟದ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಬ್ರಹ್ಮ, ವಿಷ್ಣು, ಮಹೇಶ್ವರರು ಮಾಡುವಂತಹ ಮೂರು ಕಾರ್ಯವನ್ನು ಒಬ್ಬ ಶಿಕ್ಷಕ ಮಾಡುತ್ತಾನೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ ಕರೀಕಟ್ಟಿ ಮಾತನಾಡಿ, ಗಡಿ ಕಾಯುವ ಸೈನಿಕ, ದೇಶಕ್ಕೆ ಅನ್ನ ನೀಡುವ ರೈತ, ರಾಷ್ಟ್ರ ನಿರ್ಮಾಣದ ಹೊಣೆಹೊತ್ತ ಶಿಕ್ಷಕರನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಸ್ವಾದಿಮಠದ ಶಿವಬಸವ ಸ್ವಾಮೀಜಿ, ತಾ.ಪಂ ಅಧ್ಯಕ್ಷ ಸುರೇಶ ಹಾರೋಬಿಡಿ, ಜಿ.ಪಂ ಸದಸ್ಯರಾದ ಲಕ್ಷ್ಮಣ ದೊಡಮನಿ, ಮಂಜುನಾಥ ಬಾಣಿ, ವಿದ್ಯಾರಾಣಿ ಸೊನ್ನದ, ರತ್ನವ್ವ ತೇಗೂರ, ಸರೋಜಣಿ ಕೆಂಗೇರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಬಿರಾದಾರಪಾಟೀಲ, ಸುರೇಶ ಬೆಳವಡಿ, ತಹಶೀಲ್ದಾರ್‌ಎಂ.ಎಸ್. ಬನಶಿ ಹಾಗೂ ಪುರಸಭೆ ಸದಸ್ಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು, ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು ಹಾಗೂ ಉತ್ತಮ ಶಾಲೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರೀಕಟ್ಟಿ ಸ್ವಾಗತಿಸಿದರು. ಪೂರ್ಣಿಮಾ ಕತ್ತಿಶೆಟ್ಟಿ ನಿರೂಪಿಸಿದರು. ವೈ.ಎಂ. ಶಿವಬಸಣ್ಣವರ ವಂದಿಸಿದರು.

ಮುನವಳ್ಳಿ ವರದಿ
ಮುನವಳ್ಳಿ
: ತಂದೆ-ತಾಯಿ ಜನ್ಮ ನೀಡಿದರೆ, ಶಿಕ್ಷಕ ಮರುಜನ್ಮ ನೀಡುತ್ತಾನೆ ಎಂದು ಶಿಕ್ಷಕ ಬಿ.ಬಿ. ನಾವಲಗಟ್ಟಿ ಹೇಳಿದರು.
ಮುನವಳ್ಳಿಯ ನೂತನ ಕಾನ್ವೆಂಟ ಮಾದರಿ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
ಒಬ್ಬ ಉತ್ತಮ ನಾಗರಿಕನನ್ನಾಗಿ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯವಾದದ್ದು ಆದ್ದರಿಂದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಸಂಸ್ಥೆಯ ಎಂ.ಎಂ. ಹನಸಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸುತಗಟ್ಟಿ, ಪೂಜೇರ, ಢವಣ, ನಾಯ್ಕರ, ಖನ್ನಿನಾಯ್ಕರ ಉಪಸ್ಥಿತರಿದ್ದರು.

ಮುನವಳ್ಳಿ: ಕೇವಲ ಓದು-ಬರಹ ನೀಡಿದವರು ಶಿಕ್ಷಕರಾಗುವುದಿಲ್ಲ, ಮಕ್ಕಳಲ್ಲಿ ವಿನಯ ಮತ್ತು ಶೃದ್ದಾಭಾವ ಮೂಡಿಸುವ ಮೂಲಕ ಉತ್ತಮ ಸುಸಂಸ್ಕೃತ ಪ್ರಜೆಗಳನ್ನಾಗಿಸುವುದೇ ಶಿಕ್ಷಕರ ಧ್ಯೇಯವಾಗಬೇಕು ಎಂದು ಶಿಂದೋಗಿ ಸಿಆರ್‌ಪಿ ಎಸ್.ಎಂ. ಕುಂಬಾರ ಹೇಳಿದರು.

ಶಿಂದೋಗಿಯ  ಕನಕದಾಸ ಶಿಕ್ಷಕ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕಲ್ಮೇಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು. 

ಸಂಸ್ಥೆಯ ಚೇರಮನ್ ಎಫ್.ಐ.ಮುಶೆನ್ನವರ ಮಾತನಾಡಿದರು. ಮುಖ್ಯೋಪಾಧ್ಯಾಯ ಎಂ.ಬಿ. ಇಂದುಲಕರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಹೇಶ ಕದಂ, ಎಂ.ಎಸ್. ಚರಂತಿಮಠ, ಎಂ.ಬಿ. ಜಮಾದಾರ ಉಪಸ್ಥಿತರಿದ್ದರು.  ವೈ. ಕೆ. ನೆಲಗುಡ್ಡ ಸ್ವಾಗತಿಸಿದರು. ಪಿ.ಎಲ್.ದೈವಜ್ಞ ನಿರೂಪಿಸದರು. ಎಸ್.ಯು. ಮುದಗನ್ನವರ ವಂದಿಸಿದರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಲಹೆ
ರಾಯಬಾಗ:
`ದಿನ ಆಚರಿಸಿದರೆ ಸಾಲದು, ಅದು ಸಾರ್ಥಕವಾಗಬೇಕಾದರೆ ಅಂತಹ ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು'  ಎಂದು ಮಹಾಲಿಂಗಪುರದ ಇಬ್ರಾಹಿಂ ಸುತಾರ ಹೇಳಿದರು.

ಗುರುವಾರ ಪಟ್ಟಣದ ಮಹಾವೀರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

ಡಾ.ಎಸ್.ರಾಧಾಕೃಷ್ಣನ್ ಅವರ ಆದರ್ಶಗಳನ್ನು ಅರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆ ಎರೆದು ಅವರ ಭವಿಷ್ಯವನ್ನು ರೂಪಿಸಬೇಕು ಎಂದರು.

ಬೆಳಗಾವಿಯ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ರವಿ ಭಜಂತ್ರಿ ಮಾತನಾಡಿದರು. ಸ್ಥಳೀಯ ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಂದೇಶಗಳನ್ನು ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್. ಡಿಗ್ರಜ ಓದಿದರು.

ತಹಶೀಲ್ದಾರ್ ಶಿವಾನಂದ ಸಾಗರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಭಜಂತ್ರಿ, ಇಬ್ರಾಹೀಂ ಸುತಾರ ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಕವ್ವ ಹಾಡಕಾರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರಕರ, ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್‌ಪಟೇಲ, ಉಪಾಧ್ಯಕ್ಷ ಎಚ್.ಎಲ್. ಸಂಕೆಶ್ವರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಹುಲ್ಲೋಳಿ, ಜಿಲ್ಲಾ ಪಂಚಾಯ್ತಿ ಸದಸ್ಯರು, ತಾ.ಪಂ. ಉಪಾಧ್ಯಕ್ಷ, ಸದಸ್ಯರು, ಕ್ಷೇತ್ರ ಸಮನ್ವಯಧಿಕಾರಿ ಕೆ.ಕೆ. ನಾಯ್ಕ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಎಲ್. ಜಿಲ್ಲೇದಾರ, ಈರನಗೌಡ ಪಾಟೀಲ, ಡಿ.ಎಂ. ಶೆಟ್ಟಿ, ಶಿಕ್ಷಕ ಸಂಘದ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಎಂ.ಬಿ. ಭಜಂತ್ರಿ ಸ್ವಾಗತಿಸಿದರು. ಡಿ.ಎಸ್. ಡಿಗ್ರಜ  ನಿರೂಪಿಸಿದರು.

ಹುಕ್ಕೇರಿ ವರದಿ
ಹುಕ್ಕೇರಿ:
`ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ಸಮಾಜದ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಸಮಾಜದಲ್ಲಿ ಶಿಕ್ಷಕರಿಗೆ ಗೌರವ ಸಿಗುತ್ತದೆ' ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

ಪಟ್ಟಣದ ಹೊರವಲಯದ ಅಕ್ಷರ ದಾಸೋಹ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ `ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಿ ಅವರು ಮಾತನಾಡಿದರು.

ಶಿಕ್ಷಕರು ಕಲಿಯುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ಆ ವಿದ್ಯಾರ್ಥಿಗಳು ಜೀವನ ಪರ್ಯಂತ ನೆನಪಿಸಿಕೊಂಡು ಗೌರವ ನೀಡುತ್ತಾರೆ ಎಂದರು.

ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೊಸ ವಿಚಾರ ಮೂಡುವಂತೆ ನೋಡಿಕೊಳ್ಳಲು ಸಲಹೆ ನೀಡಿದರು. 

ಉಪನ್ಯಾಸಕ ಶ್ರೆಶೈಲ ಮಠಪತಿ ಉಪನ್ಯಾಸ ನೀಡಿದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ನಂದಾ ಸನ್ನಾಯಿಕ, ತಾ.ಪಂ. ಅಧ್ಯಕ್ಷೆ ಶೋಭಾ ಹಿರೇಕೋಡಿ, ಜಿ.ಪಂ. ಸದಸ್ಯೆಯರಾದ ಶೋಭಾ ಮದಕರಿ, ಅಂಜನಾ ಹೆಬ್ಬಾಳಿ, ಸದಸ್ಯ ಮಕಬುಲ್ ಮುಲ್ಲಾ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ತಾ.ಪಂ. ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ, ಪ.ಪಂ. ಸದಸ್ಯ ಮಹಾವೀರ ನಿಲಜಗಿ, ಎಇಇ ಬಿ.ಡಿ. ನಸಲಾಪುರೆ, ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಬಾಯನ್ನವರ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಸಿ. ಖಾನಾಪುರೆ, ಕಾರ್ಯದರ್ಶಿ ಮಹಾಂತೇಶ, ರೇವತಿ ಮಠದ ಸೇರಿದಂತೆ ಶಿಕ್ಷಕರು ಪಾಲ್ಗೊಂಡಿದ್ದರು.

ಸನ್ಮಾನ: ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎನ್.ಬಿ.ತೇರದಾಳ,  ತಮ್ಮಣ್ಣ ಹಡಪದ, ಎನ್.ಎಸ್. ಬಡಿಗೇರ ಸೇರಿದಂತೆ ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಬಿಇಒ ಗಜಾನನ ಮನ್ನಿಕೇರಿ ಸ್ವಾಗತಿಸಿದರು. ಶಿಕ್ಷಕ  ಶಿವಾನಂದ ಗುಂಡಾಳಿ ಮತ್ತು ಎಂ.ಎಸ್. ಪೂಜಾರ  ನಿರೂಪಿಸಿದರು. ಅಕ್ಷರ ದಾಸೋಹ ಕೇಂದ್ರದ ಸಹಾಯಕ ನಿರ್ದೇಶಕ ಅರಿಹಂತ ಬಿರಾದಾರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT