ಜಮಖಂಡಿ: ಮಹಾನ್ ತತ್ವಜ್ಞಾನಿ, ಅಧ್ಯಾತ್ಮಿಕ ಚಿಂತಕ ಶ್ರೀಗುರುದೇವ ರಾನಡೆ ಅವರ ಜೀವನ ಚರಿತ್ರೆ, ಆದರ್ಶ ಮತ್ತು ತತ್ವೋಪದೇಶಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ಇಲ್ಲಿನ ಸರಕಾರಿ ಪಿ.ಬಿ. ಹೈಸ್ಕೂಲ್ ಆವರಣದಲ್ಲಿ ಅಂದಾಜು ರೂ 99.96 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಶ್ರೀಗುರುದೇವ ರಾನಡೆ ಸಾಂಸ್ಕೃತಿಕ ಭವನ ಕಟ್ಟಡ ಕಾಮಗಾರಿ ಆರಂಭಕ್ಕೆ ಶನಿವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಭವನ ನಿರ್ಮಾಣಕ್ಕೆ ಬೇಕಾಗಿರುವ ಇನ್ನೂ ರೂ 50 ಲಕ್ಷ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸಾಂಸ್ಕೃತಿಕ ಭವನ ಪೂರ್ಣಗೊಳ್ಳಲು ಬೇಕಾಗಿರುವ ಇನ್ನೂ ರೂ 50 ಲಕ್ಷ ಅನುದಾನ ಬಿಡುಗಡೆ ಹಾಗೂ ಹೈಸ್ಕೂಲಿಗೆ ಇನ್ನೂ 10 ಕೊಠಡಿ ನಿರ್ಮಿಸಲು ಅನುದಾನ ನೀಡಲು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರುಗಳಾದ ಜಿ.ಎಸ್.ನ್ಯಾಮಗೌಡ ಮತ್ತು ಅರುಣ ಶಹಾಪುರ, ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ, ಶಿಕ್ಷಣ ಇಲಾಖೆಯ ಧಾರವಾಡ ವಲಯ ಅಪರ ಆಯುಕ್ತ ಬಿ.ವಿ.ಕುಲಕರ್ಣಿ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಡಿಡಿಪಿಐ ಸಿದ್ಧರಾಮ ಮನಹಳ್ಳಿ, ಡಿಡಿಪಿಯು ವೈ.ಎಚ್.ಇಲಾಳ, ಬಿಇಓ ಎ.ಸಿ.ಗಂಗಾಧರ, ಬಿಇಓ ಎಂ.ಎಂ.ಮಡಿವಾಳರ, ಸಿಡಿಸಿ ಅಧ್ಯಕ್ಷ ಎಸ್.ಎಸ್.ನ್ಯಾಮಗೌಡ ವೇದಿಕೆಯಲ್ಲಿದ್ದರು. ಶಿಕ್ಷಕ ಎಸ್.ಎಂ.ದಾಶ್ಯಾಳ ಸ್ವಾಗತಿಸಿ, ನಿರೂಪಿಸಿದರು.