ಗುಲ್ಬರ್ಗ ನಗರದ ಹೊರವಲಯದಲ್ಲಿ ಇರುವ ಈ ಕ್ಷೇತ್ರದ ಹೆಸರು ರಾಮತೀರ್ಥ. ವಿಶೇಷ ಎಂದರೆ ಇಲ್ಲಿನ ದೇವರು ಈಶ್ವರ. ಶಿವರಾತ್ರಿ ಮತ್ತು ಅಮಾವಾಸ್ಯೆ ದಿನ ಇಲ್ಲಿ ಭಕ್ತರ ಸಾಗರವೇ ಹರಿದುಬರುತ್ತದೆ.
ಶ್ರೀರಾಮ ಸೀತೆಯನ್ನು ಹುಡುಕುತ್ತ ಬಂದು ಈ ಸ್ಥಳದಲ್ಲಿ ಕೆಲ ಕಾಲ ತಂಗುತ್ತಾನೆ. ಶಿವನನ್ನು ಒಲಿಸಿಕೊಳ್ಳಲು ಇಲ್ಲಿ ಪೂಜೆ ಮಾಡುತ್ತಾನೆ ಎನ್ನುತ್ತದೆ ಸ್ಥಳ ಪುರಾಣ.
ನಗರದ ಹೊರವಲಯದಲ್ಲೇ ಇದ್ದರೂ ಮುಳ್ಳು, ಕಲ್ಲು, ಗಿಡ, ಪೊದೆಯಿಂದ ತುಂಬಿಕೊಂಡಿದ್ದ ಸ್ಥಳ ಇದು.
1842 ರಲ್ಲಿ ಗರ್ಭಗುಡಿ ನಿರ್ಮಿಸಲಾಗಿತ್ತು. ರತ್ನಾಬಾಯಿ ಕಲ್ಯಾಣಪ್ರಸಾದ ಶುಕ್ಲಾ ಎಂಬ ಭಕ್ತೆ ಇದಕ್ಕೆ 3 ಎಕರೆ 6 ಗುಂಟೆ ಭೂಮಿ ದಾನ ಮಾಡಿದ್ದರು. ಮುಂದೆ 1958ರಲ್ಲಿ ದೇವಸ್ಥಾನದ ನೂತನ ಮಂಟಪ ಕಟ್ಟಲಾಯಿತು. ಈಗಲೂ ದೇವಾಲಯದ ಕಾಮಗಾರಿ ಚಾಲನೆಯಲ್ಲಿದೆ.