ದಾಂಡೇಲಿ: ಇಲ್ಲಿಯ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ವತಿಯಿಂದ ವಿಜಯದಶಮಿ ದಿನ ರಾಮಲೀಲಾ ಉತ್ಸವ ಆಚರಿಸಲಾಯಿತು. 35 ಸಾವಿರಕ್ಕೂ ಹೆಚ್ಚು ಜನ ಉತ್ಸವಕ್ಕೆ ಸಾಕ್ಷಿಯಾದರು.
ಬಂಗೂರನಗರದ ರಾಮಮಂದಿರ ದಿಂದ ಹೊರಟ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾಮಾತೆಯ ಪಲ್ಲಕ್ಕಿ ವೇಷಧಾರಿಗಳು ಪಾಲ್ಗೊಂಡಿದ್ದ ಮೆರವಣಿಗೆ ರಾಮಲೀಲಾ ಮೈದಾನಕ್ಕೆ ಆಗಮಿಸಿತು.
ಕಾಗದ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಎಲ್. ಚಂಡಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಪಾಲಕಿಗೆ ಪೂಜೆ ಸಲ್ಲಿಸಿದರು. ಮೈದಾನದಲ್ಲಿ ತೇರಗಾಂವದ ಕಲಾವಿದ ಉಮೇಶ ಮರಿಯಪ್ಪ ರಾವುತ್ ನಿರ್ಮಿಸಿದ್ದ 48 ಎತ್ತರದ ರಾವಣ ಹಾಗೂ 42ಅಡಿ ಎತ್ತರದ ಕುಂಭಕರ್ಣ, ಮೇಘನಾಥರ ಪುತ್ಥಳಿಗಳ ಎದುರು ಹುಬ್ಬಳ್ಳಿಯ ಎಂ.ಡಿ. ನಿಂಬುವಾಲಾ ಆ್ಯಂಡ್ ಸನ್ಸ್ ಒಂದು ಗಂಟೆಗೂ ಹೆಚ್ಚು ಕಾಲ ಆಕರ್ಷಕ ಸಿಡಿಮದ್ದು ಪ್ರದರ್ಶಿಸಿದರು.
ರಂಗು ರಂಗಿನ ಹೂಕುಂಡಗಳ ಸಿಡಿತ, ಬೆಂಕಿಯ ಚಕ್ರದುಂಡೆ, ಬೋರ್ಗರೆ ಯುವ ಜಲಪಾತದ ದೃಶ್ಯ, ಆಕಾಶದೀಪವನ್ನು ಬಾನಂಗಳ ದಲ್ಲಿ ಹಾರಿಬಿಡುವ ದೃಶ್ಯ ಜನ ಸ್ತೋಮದ ಮೇಲೆ ಹೂಮಳೆಗರೆದ ಅನುಭವನೀಡಿತು. ಮದ್ದು ಸುಡುವ ಕಾರ್ಯಕ್ರಮಕ್ಕೆ 10ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು.
ವೇದಿಕೆಯಲ್ಲಿ ಪೊಲೀಸ್ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಹಳಿಯಾಳ ತಹಸೀಲ್ದಾರ ಎ.ಆರ್. ದೇಸಾಯಿ, ಜಿಲ್ಲೆಯ ಪ್ರಮುಖರು ಉಪಸ್ಥಿತರಿದ್ದರು.