ತರೀಕೆರೆ: ಸರ್ವವನ್ನು ತ್ಯಾಗ ಮಾಡಿ ಸಾಂಸಾರಿಕ ಜೀವನ ತ್ಯಜಿಸಿರುವ ಯೋಗಗುರು ಬಾಬಾ ರಾಮ್ದೇವ್ಗೆ ಸಾವಿರಾರು ಕೋಟಿ ಹಣ ಏಕೆ ಬೇಕು? ಸನ್ಯಾಸಿಗಳು ಮೋಕ್ಷದ ಬಗ್ಗೆ ಚಿಂತನೆ ಮಾಡಬೇಕೇ ಹೊರತು ಲೌಕಿಕ ಜೀವನದ ಮೇಲಲ್ಲ ಎಂದು ಕಾಂಗ್ರೆಸ್ ಮುಖಂಡ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಬಾಬಾ ರಾಮ್ದೇವ್ ಅವರ ಹಠಮಾರಿ ನಿಲುವನ್ನು ಖಂಡಿಸಿದರು.
ಇಲ್ಲಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಅನೇಕತೆಯಲ್ಲಿ ಏಕತೆಯನ್ನು ಕಂಡ ಭಾರತದಲ್ಲಿ ಏಕತೆ ಪರಿಕಲ್ಪನೆ ಉಳಿಸುವ ಚಿಂತನೆಯನ್ನು ಕೇಂದ್ರ ನಡೆಸಿದೆ ಎಂದರು.
ಭ್ರಷ್ಟಾಚಾರ ರಹಿತ ಸರ್ಕಾರ ನೀಡಬೇಕು ಎಂಬ ಮಹದ್ದುದ್ದೇಶವನ್ನು ಪ್ರಧಾನಿ ಮನಮೋಹನ್ಸಿಂಗ್ ಮತ್ತು ಯುಪಿಎ ನಾಯಕಿ ಸೊನಿಯಾಗಾಂಧಿ ಹೊಂದಿದ್ದರೂ ವ್ಯವಸ್ಥೆಯಲ್ಲಿ ದೋಷದಿಂದಾಗಿ ಅದನ್ನು ಸಾಧಿಸಲು ಸಾಧ್ಯವಿಲ್ಲ. ಮುಂಬರುವ ಮೂರು ವರ್ಷ ಶುದ್ಧ ಆಡಳಿತ ನೀಡುವ ಉದ್ದೇಶ ಅವರು ಹೊಂದಿದ್ದಾರೆ ಎಂದರು.
ಕೇವಲ ವಿರೋಧ ಪಕ್ಷದ ನಾಯಕರ ಮೇಲೆ ಆರೋಪ ಮಾಡಿದರೆ ಸಾಲದು. ಅವರ ಮೇಲಿರುವ ಆರೋಪವನ್ನು ಸಾಬೀತು ಮಾಡಿ ಅವರನ್ನು ಜೈಲಿಗಟ್ಟಲಿ ಇಲ್ಲವೆ ಅಧಿಕಾರ ತ್ಯಜಿಸಲಿ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ ಅವರು, ಕೇಂದ್ರದಲ್ಲಿ ಒಡೆದ ಮನೆಯಂತಾಗಿರುವ ಬಿಜೆಪಿ ಮುಖಂಡರ ಪರಿಸ್ಥಿತಿಯ ಲಾಭವನ್ನು ಯಡಿಯೂರಪ್ಪ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ಪುರಸಭಾಧ್ಯಕ್ಷ ಟಿ.ಜೆ.ಗೋಪಿಕುಮಾರ್, ಉಪಾಧ್ಯಕ್ಷೆ ಸುವರ್ಣಮ್ಮ, ಮಾಜಿ ಅಧ್ಯಕ್ಷ ಉಮ್ಮರ್ ಫಾರೂಕ್, ಕಾಂಗ್ರೆಸ್ ಮುಖಂಡರಾದ ಗೊಲ್ಲರಹಳ್ಳಿ ರಂಗಪ್ಪ, ಮಿರ್ಜಾ ಇಸ್ಮಾಯಿಲ್, ಸಯ್ಯದ್ ಅನ್ಸರ್ಖಲೀಂ, ಅಮ್ಜದ್ ಪಾಶ ಇದ್ದರು.