ಹೊಸಪೇಟೆ: ನಗರದ ಮಧ್ಯೆ ಭಾಗದಲ್ಲಿ ಹರಿದು ಹೋಗುತ್ತಿರುವ ರಾಯ ಕಾಲುವೆ ನೀರು ಸೋರಿಕೆಯಿಂದ ನೂರಾರು ರೈತರ ಗದ್ದೆಗಳಿಗೆ ನೀರು ನುಗ್ಗಿ ಬೆಳೆದ ಫಸಲು ಹಾಳಾಗಿ ರೈತರು ಆತಂಕ ಪಡುವಂತಾಗಿದೆ.ತುಂಗಭದ್ರಾ ಜಲಾಶಯದ ಕಿರು ರಾಯ ಕಾಲುವೆಯಲ್ಲಿ ಹೂಳು ಮತ್ತು ಜಂಗಲ್ ತುಂಬಿದ್ದರಿಂದ ನೀರು ಕೊನೆಯವರೆಗೂ ಹರಿದು ಹೋಗಲು ಸಾಧ್ಯವಾಗದೇ ನಗರದ ಹೊರ ವಲಯದ ಭಟ್ಟರ ಹಳ್ಳಿ ಆಂಜಿನೇಯ ದೇವಸ್ಥಾನ ವ್ಯಾಪ್ತಿಯ ನೂರಾರು ರೈತರ ಗದ್ದೆಗಳಿಗೆ ಕಳೆದ ಒಂದು ವಾರದಿಂದ ಕಾಲುವೆಯ ನೀರು ನುಗ್ಗಿ ಬೆಳೆಗಳನ್ನು ಹಾಳು ಮಾಡಿದೆ. ಇದಕ್ಕೆ ನೀರಾವರಿ ಇಲಾಖೆ ಎಂಜಿನಿಯರ್ ನಿರ್ಲಕ್ಷ್ಯವೇ ಕಾರಣ ಎಂದು ಆ ಭಾಗದ ರೈತರು ಆರೋಪಿಸಿದ್ದಾರೆ.
ಕಾಲುವೆ ಹೂಳು ಮತ್ತು ಜಂಗಲ್ನ್ನು ತೆಗೆಯದೇ ಹೋದ ಹಿನ್ನೆಲೆಯಲ್ಲಿ ನೀರು ಸುಗಮವಾಗಿ ಸಾಗದೇ ಕಾಲುವೆ ಉದ್ದಕ್ಕೂ ಸೋರಿಕೆಯಾಗಿ ಕಾಲುವೆ ಕೆಳ ಭಾಗದ ರೈತರಿಗೆ ನೀರು ತಲುಪದೇ ಹಾಗೂ ಅನಗ್ಯವಾಗಿ ಇತರ ರೈತರ ಗದ್ದೆಗಳಿಗೆ ನೀರು ನುಗ್ಗುವುದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಜನವರಿ ತಿಂಗಳಲ್ಲಿ ಜಲಾಶಯದ ಎಲ್ಲಾ ಕಾಲುವೆಗಳ ಸ್ವಚ್ಛತೆ ಹಾಗೂ ಕಾಮಗಾರಿಗೆ ಇಲಾಖೆ ಮುಂದಾಗುತ್ತಿದ್ದು ಗುತ್ತಿಗೆದಾರಿಗೆ ಹಾಗೂ ಇಲಾಖೆಯ ಕೆಲ ಅಧಿಕಾರಿ ಗಳು ಶಾಮೀಲಾಗಿ ಕಾಮಗಾರಿಗಳನ್ನು ಮಾಡದೇ ಪುನಃ ನೀರು ಹರಿಸುವುದ ರಿಂದ ಇಂಥ ಅನಾಹುತಕ್ಕೆ ಕಾರಣ ಆಗುತ್ತಿದೆ ಎಂದು ರೈತರು ದೂರಿದ್ದಾರೆ. ಕಾಲುವೆಯಲ್ಲಿ ತುಂಬಿರು ಹೂಳು ಹಾಗೂ ಜಂಗಲ್ನ್ನು ತೆರವುಗೊಳಿಸಿ ನೀರು ಸೋರಿಕೆಯನ್ನು ತಡೆಗಟ್ಟಬೇಕು ಎಂದು ರೈತರು ಒತ್ತಾಯಿಸಿದ್ದಾರೆ.