ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ: ಆದಿವಾಸಿಗೆ ಅವಕಾಶ ನೀಡಿ

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಸಮಸ್ತ ಆದಿವಾಸಿಗಳ ಪ್ರತಿನಿಧಿಯಾಗಿ ತಾವು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ಬೆಂಬಲ ನೀಡಲು ಎಲ್ಲ ರಾಜಕೀಯ ಪಕ್ಷಗಳಿಗೆ ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ  ಕೋರಿದ್ದಾರೆ.

ಎನ್‌ಸಿಪಿ ಮುಖಂಡರೂ ಆಗಿರುವ ಸಂಗ್ಮಾ ಅವರನ್ನು ಈಗಾಗಲೇ ಬಿಜೆಡಿ ಹಾಗೂ ಎಐಎಡಿಎಂಕೆ ಬೆಂಬಲಿಸಿವೆ. ಯುಪಿಎ, ಎನ್‌ಡಿಎ ಸೇರಿದಂತೆ ಇತರ ರಾಜಕೀಯ ಪಕ್ಷಗಳೂ ತಮಗೆ ಬೆಂಬಲ ನೀಡಲಿವೆ ಎಂಬ ವಿಶ್ವಾಸವನ್ನು ಸಂಗ್ಮಾ ವ್ಯಕ್ತಪಡಿಸಿದ್ದಾರೆ.

ಕೆಲ ಆದಿವಾಸಿ ಸಂಸದರ ಜತೆಗೂಡಿ ಮಂಗಳವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದ ಸಂಗ್ಮಾ , ಎಲ್ಲ ಪಕ್ಷಗಳ ಆದಿವಾಸಿ ಸಂಸದರ ಬೆಂಬಲ ಕೋರಿದರು.

ಈ ನಡುವೆ ಸಂಗ್ಮಾ ಪುತ್ರಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ ಅಗತಾ ಸಂಗ್ಮಾ ಪ್ರತಿಕ್ರಿಯೆ ನೀಡಿ, ಈ ಸಂಬಂಧ ಯುಪಿಎ ಒಮ್ಮತದ ನಿರ್ಧಾರ ಕೈಗೊಳ್ಳುವ ಆಶಾವಾದವನ್ನು ವ್ಯಕ್ತಪಡಿಸಿದರು.

ಮಾಯಾ ನಿರ್ಧಾರ ಇಲ್ಲ: ರಾಷ್ಟ್ರಪತಿ ಚುನಾವಣೆಯ ಸಂಬಂಧ ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿಕೆ ನೀಡಿದ್ದು, ಯುಪಿಎ ಇಲ್ಲವೆ ಎನ್‌ಡಿಎ ಈತನಕ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹೀಗಿರುವಾಗ ನಾವು ಯಾರನ್ನು ಬೆಂಬಲಿಸಬೇಕು ಎನ್ನುವ ಪ್ರಶ್ನೆಯೇ ಈಗ ಉದ್ಭವಿಸುವುದಿಲ್ಲ ಎಂದರು.

ಕಾರಟ್ ಭೇಟಿ
: ಎಡ ಪಕ್ಷಗಳ ಬೆಂಬಲ ಕೋರಿದ ಸಂಗ್ಮಾ ಮಂಗಳವಾರ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ಭೇಟಿ ಮಾಡಿ `ಈ ಬಾರಿ ಆದಿವಾಸಿಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆಮಾಡಿ~ ಎಂದು ಕೋರಿದರು.

ಬುಧವಾರ ಎಡಪಕ್ಷಗಳ ಸಭೆ ನಡೆಯಲಿದ್ದು ರಾಷ್ಟ್ರಪತಿ ಅಭ್ಯರ್ಥಿ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆ ಇದೆ. ಆದರೆ ಮಾಸಾಂತ್ಯಕ್ಕೆ ಈ ಸಂಬಂಧ ಎಡಪಕ್ಷಗಳ ನಿರ್ಧಾರ ಹೊರಬೀಳಲಿದೆ ಎಂದು ಸಂಗ್ಮಾ ತಿಳಿಸಿದರು.

ಬೇಗ ನಿರ್ಧಾರ: ಸಿಪಿಎಂ ಆಗ್ರಹ

ದೇಶದ ಸಂವಿಧಾನ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನ ಎನಿಸಿದ ರಾಷ್ಟ್ರಪತಿ ಸ್ಥಾನದ  ಅಭ್ಯರ್ಥಿಯನ್ನು ಆಡಳಿತಾೂಢ ಯುಪಿಎ (ಕಾಂಗ್ರೆಸ್) ಆದಷ್ಟು ಬೇಗ ಪ್ರಕಟಿಸಲು ಸಿಪಿಎಂ ಒತ್ತಾಯಿಸಿದೆ.

ನೀವು ಈ ವಿಷಯದಲ್ಲಿ ವಿಳಂಬ ಮಾಡಿದಷ್ಟು ಆಕಾಂಕ್ಷಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಇಂತಹ  ಬೆಳವಣಿಗೆ ಜನರಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ಎಲ್ಲರಿಂದಲೂ ಸ್ವೀಕೃತ ವ್ಯಕ್ತಿ ಅತ್ಯುನ್ನತ ಸ್ಥಾನ ಅಲಂಕರಿಸಬೇಕು ಎಂಬುದು ನಮ್ಮ ಅಶಯ ಎಂದು ಸಿಪಿಎಂ ಹಿರಿಯ ಮುಖಂಡ ಸೀತಾರಾಮ ಯೆಚೂರಿ ಹೇಳಿದರು.

ಪಿ.ಎ. ಸಂಗ್ಮಾ ಇಲ್ಲವೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಬೆಂಬಲಿಸಿರುವ ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಅವರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಯಾರನ್ನು ಬೆಂಬಲಿಸುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯೆಚೂರಿ, ಈ ಕುರಿತು ಮೊದಲು ಸರ್ಕಾರವೇ (ಯುಪಿಎ) ತನ್ನ  ನಿರ್ಧಾರವನ್ನು ಮೊದಲು ಪ್ರಕಟಿಸಬೇಕಿದೆ. ಆದರೆ ರಾಷ್ಟ್ರಪತಿ ಹುದ್ದೆ ಬಯಸುವವರು ಎಲ್ಲರಿಂದಲೂ ಸ್ವೀಕೃತವಾಗಿರಬೇಕು ಎನ್ನುವುದು ನಮ್ಮ ನಿಲುವು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT