ನವದೆಹಲಿ (ಪಿಟಿಐ): ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರನ್ನು ಬಿಜೆಡಿ ಮತ್ತು ಎಐಎಡಿಎಂಕೆ ಬೆಂಬಲಿಸಿದ್ದರೂ ಅವರ ಸ್ವಂತ ಪಕ್ಷ ಎನ್ಸಿಪಿ ಮಾತ್ರ ಯಾವುದೇ ಬೆಂಬಲ ಸೂಚಿಸಿಲ್ಲ.
ಈ ಹಿನ್ನೆಲೆಯಲ್ಲಿ ಸಂಗ್ಮಾ ಅವರು ಶುಕ್ರವಾರ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿದರು.
ಎನ್ಸಿಪಿ ಆಡಳಿತರಾರೂಢ ಯುಪಿಎ ಅಂಗ ಪಕ್ಷವಾಗಿದ್ದರಿಂದ ಅದು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಈ ಸಂದರ್ಭದಲ್ಲಿ ಪವಾರ್ ಸ್ಪಷ್ಟಪಡಿಸಿದ್ದಾರೆ. ಭೇಟಿ ವೇಳೆ ಸಂಗ್ಮಾ ನೀಡಿದ ಎಲ್ಲ ಸಲಹೆಗಳನ್ನೂ ಚರ್ಚಿಸುವುದಾಗಿಯೂ ಕೇಂದ್ರ ಕೃಷಿ ಸಚಿವರೂ ಆಗಿರುವ ಪವಾರ್ ಹೇಳಿದ್ದಾರೆ.
ಈ ಮಧ್ಯೆ ಸಂಗ್ಮಾ ಬೆಂಬಲಿಸಿ ಗುರುವಾರ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿಕೆ ನೀಡಿ, ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ಬುಡಕಟ್ಟು ಜನಾಂಗದ ನಾಯಕ ಸಂಗ್ಮಾ ಅವರನ್ನೇ ಬೆಂಬಲಿಸಲು ಮುಂದಾಗುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಶುಕ್ರವಾರ ಮನವಿ ಮಾಡಿದ್ದಾರೆ.