ಬೆಹ್ರಾಂಪುರ (ಪಶ್ಚಿಮ ಬಂಗಾಳ) (ಪಿಟಿಐ): ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಹಾಗೂ ವಿವಾಹಿತೆಯೊಬ್ಬರ ಹತ್ಯೆ ಪ್ರಕರಣಗಳಲ್ಲಿ ತಮಗೆ ಶೀಘ್ರವಾಗಿ ನ್ಯಾಯ ಒದಗಿಸುವಂತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಮನವಿ ಮಾಡಲು ಖಾರ್ಜುನ ಮತ್ತು ರಾಣಿತಾಲ ಗ್ರಾಮಗಳ ಜನರು ಭಾನುವಾರ ದೆಹಲಿಗೆ ತೆರಳಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡುವುದಕ್ಕಾಗಿ ಕಾಮದುನಿ ಗ್ರಾಮದ ಜನರು ರಾಷ್ಟ್ರಪತಿ ಭೇಟಿಗಾಗಿ ತೆರಳಿದ ಮರುದಿನವೇ ಈ ಎರಡು ಗ್ರಾಮಗಳ ಜನರು ದೆಹಲಿಯತ್ತ ತೆರಳಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಜನರ ಪ್ರಯಾಣಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಕಾಂಗ್ರೆಸ್ ಸಂಸದ ಅಧೀರ್ ಚೌಧರಿ ಅವರು ವ್ಯವಸ್ಥೆ ಮಾಡಿದ್ದಾರೆ.ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, 15 ವರ್ಷದ ಬಾಲಕಿಯ ಕೊಳೆತ ಶವವು ರಾಣಿತಾಲ ಗ್ರಾಮದಲ್ಲಿ ಜೂನ್ 15ರಂದು ಪತ್ತೆಯಾಗಿತ್ತು.
ಖಾರ್ಜುನದಲ್ಲಿ ನಡೆದ ಪ್ರಕರಣದಲ್ಲಿ 23 ವರ್ಷದ ವಿವಾಹಿತೆಯ ಶವ ಜೂನ್ 23ರಂದು ಪತ್ತೆಯಾಗಿತ್ತು. ಆಕೆಯ ಪ್ರೇಮಿಯೇ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಶಂಕಿಸಿದ್ದ ಪೊಲೀಸರು, ಅತ್ಯಾಚಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ತನಿಖೆಯ ಬಗ್ಗೆ ಗ್ರಾಮಸ್ಥರು ಅತೃಪ್ತಿ ವ್ಯಕ್ತಪಡಿಸಿದ್ದರು. ಹೀಗಾಗಿ ಗ್ರಾಮಸ್ಥರು ಸೋಮವಾರ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ.