ಚೆನ್ನೈ/ಭುವನೇಶ್ವರ(ಪಿಟಿಐ): ಪ್ರಾದೇಶಿಕ ಪಕ್ಷಗಳಾದ ತಮಿಳುನಾಡಿನ ಎಐಎಡಿಎಂಕೆ ಮತ್ತು ಒಡಿಶಾದ ಬಿಜೆಡಿ ಪಕ್ಷಗಳು ಮುಂದಿನ ರಾಷ್ಟ್ರಪತಿ ಆಯ್ಕೆಗೆ ಲೋಕಸಭೆ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ ಅವರನ್ನು ಬೆಂಬಲಿಸಿವೆ. ಆದರೆ ಸಂಗ್ಮಾ ಅವರ ಎನ್ಸಿಪಿ ಈ ವಿಷಯದಲ್ಲಿ ಅಂತರ ಕಾಯ್ದುಕೊಳ್ಳಲು ಬಯಸಿದೆ.
ಮೊದಲಿಗೆ ಬಿಜೆಡಿ ಮುಖ್ಯಸ್ಥರಾದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭುವನೇಶ್ವರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಸಂಗ್ಮಾ ಅವರು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಬೇಕೆಂಬುದು ನನ್ನ ಅನಿಸಿಕೆ~ ಎಂದು ಪ್ರಕಟಿಸಿದರು.
ಈ ಕುರಿತು ಜಯಲಲಿತಾ ಅವರೊಂದಿಗೆ ತಾವು ಚರ್ಚೆ ನಡೆಸಿದ್ದಾಗಿಯೂ ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಇದಾದ ಕೆಲವೇ ಹೊತ್ತಿಗೆ, ಜಯಲಲಿತಾ ಚೆನ್ನೈನಲ್ಲಿ ಪತ್ರಿಕಾ ಹೇಳಿಕೆ ನೀಡಿ, `ರಾಷ್ಟ್ರಪತಿಯಾಗಿ ಸಂಗ್ಮಾ ಅವರ ಆಯ್ಕೆಯನ್ನು ಬೆಂಬಲಿಸಲು ತಮ್ಮ ಪಕ್ಷ ನಿರ್ಧರಿಸಿದೆ~ ಎಂದು ತಿಳಿಸಿದರು.
ಮೇ 15ರಂದು ಸಂಗ್ಮಾ ಅವರನ್ನು ಭೇಟಿಯಾಗಿದ್ದನ್ನು ಪ್ರಸ್ತಾಪಿಸಿರುವ ಅವರು, `ಸಂಗ್ಮಾ ಬುಡಕಟ್ಟು ಸಮುದಾಯದ ನಾಯಕರಾಗಿರುವ ಜತೆಗೆ ಮಹಾನ್ ರಾಷ್ಟ್ರದ ರಾಷ್ಟ್ರಪತಿಯಾಗಲು ಬೇಕಾಗುವ ಎಲ್ಲ ಪರಿಣತಿಯನ್ನೂ ಹೊಂದಿದ್ದಾರೆ~ ಎಂದು ಬಣ್ಣಿಸಿದ್ದಾರೆ.
ಈವರೆಗೆ ಬುಡಕಟ್ಟು ಸಮುದಾಯದವರ್ಯಾರೂ ರಾಷ್ಟ್ರಪತಿ ಆಗಿಲ್ಲ. ಈ ಬಾರಿಯಾದರೂ ಅವರಿಗೆ ಅವಕಾಶವಾಗಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.