ಕುಕನೂರು: ಇಲ್ಲಿಯ ವಿದ್ಯಾನಂದ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಧ್ಯಪ್ರದೇಶ ರಾಜ್ಯದ ಭೂಪಾಲ್ನಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆ ಆಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನ. 30ರಿಂದ ಡಿ. 2ರ ವರೆಗೆ ಜರುಗಿದ ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಶಕ್ತಿ–ಅನ್ವೇಷಣೆ, ಬಳಸಿ–ಉಳಿಸಿ ಎಂಬ ಕೇಂದ್ರ ವಿಷಯದ ಮೇಲೆ ತಯಾರಿಸಲಾಗಿದ್ದ ‘ಹೊಗೆ ರಹಿತ ಒಲೆ’ ಪ್ರಾತ್ಯಕ್ಷಿಕೆಯನ್ನು ಸಮಾವೇಶದಲ್ಲಿ ಪ್ರದರ್ಶಿಸಿದ್ದರು.
ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾರ್ಗದರ್ಶಿ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಮಾತನಾಡಿದರು.
ತಂಡದ ನಾಯಕಿ ಸ್ವಾತಿ ಪಾಟೀಲ ಮಾತನಾಡಿದರು. ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಜಹಗೀರದಾರ, ಪಾಲಿಟೆಕ್ನಿಕ್ ಪ್ರಾಚಾರ್ಯ ಎನ್.ಆರ್.ಕುಕನೂರು, ಪಿಯು ಪ್ರಾಚಾರ್ಯ ಕೆ.ಆರ್.ಕುಲಕರ್ಣಿ, ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಸ್ಥ ಎಸ್.ಎಲ್. ಲಮಾಣಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಡಿ.ಆರ್.ಕುಲಕರ್ಣಿ ಸಾಧನೆಗೈದ ಸ್ವಾತಿ ಪಾಟೀಲ, ದೀಪಾ ಕಮತರ, ಅಂದಾನಮ್ಮ ಬಳಗೇರಿ, ತನುಜಾ ದರ್ಜಿ, ಕವಿತಾ ಮುತ್ತಾಳ ಮಾರ್ಗ-ದರ್ಶಿ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಅವರನ್ನು ಸನ್ಮಾನಿಸಿ, ವಿಶಿಷ್ಟ ಸಾಧನೆಯನ್ನು ಮನದಾಳದಿಂದ ಕೊಂಡಾಡಿದರು.
ಮುಖ್ಯೋಪಾಧ್ಯಾಯ ಚನ್ನಯ್ಯ ಹಿರೇಮಠ, ಚಂದ್ರಶೇಖರ್, ಶ್ರೀಕಾಂತ ಕುಲಕರ್ಣಿ ಉಪಸ್ಥಿತರಿದ್ದರು. ಶಿಕ್ಷಕಿ ಯಶೋಧಾ ತೋಟಪ್ಪನವರ ಸ್ವಾಗತಿಸಿದರು. ಮಂಜುನಾಥ ಪೂಜಾರ ನಿರೂಪಿಸಿ, ವಂದಿಸಿದರು.