ಮಡಿಕೇರಿ: ಪಂಜಾಬ್ನ ಅಮೃತ್ಸರದಲ್ಲಿ ಸೆಪ್ಟೆಂಬರ್ 2ರಿಂದ 4ರವರೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಏರೊಬಿಕ್ ಚಾಂಪಿಯನ್ಷಿಪ್ನ ಹಿಪ್ಹಾಪ್ ಜ್ಯೂನಿಯರ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮಡಿಕೇರಿಯ ಕಾವೇರಿ ಆರ್ಟ್ಸ್ ಸ್ಕೂಲ್ (ಸಿಎಎಸ್) ತಂಡವು ಪ್ರಥಮ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಗೆದ್ದುಕೊಂಡಿದೆ.
ಪಂಜಾಬ್ ಮತ್ತು ಹರಿಯಾಣ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
ಮಡಿಕೇರಿ ತಂಡದಲ್ಲಿ ರಾಹುಲ್ ರಾವ್, ಹೃತಿಕ್ ಆರ್.ಅನ್ವೇಕರ್, ದರ್ಶಿನಿ ಸಿ.ಕೆ., ಕಾವ್ಯ ಸಿ.ಎಂ., ರಿನಿಟಾ ಪಿಂಟೊ, ಬಲ್ಲಚಂಡ ಟೌಲಿನ್ ಫರೂಕ್, ಪ್ರಜ್ಞಾ ರೈ, ಭಾಗ ವಹಿಸಿದ್ದರು. ತರಬೇತುದಾರರಾಗಿ ಮಡಿಕೇರಿಯ ವಿನೋದ್ ಕರ್ಕೆರಾ ಮಂಗೇರಿರಾ, ಡ್ಯಾನಿ ಗಣಪತಿ ಹಾಗೂ ರಾಜ್ಯ ಸ್ಪೋರ್ಟ್ಸ್ ಏರೊಬಿಕ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಸಿ.ರವಿ ಪಾಲ್ಗೊಂಡಿದ್ದರು.
ಸ್ಪರ್ಧೆಯನ್ನು ಪಂಜಾಬ್ ಏರೊಬಿಕ್ ಅಸೋಸಿಯೇಶನ್ ಹಾಗೂ ಭಾರತೀಯ ಏರೊಬಿಕ್ ಅಸೋಸಿಯೇಶನ್ ಜಂಟಿಯಾಗಿ ಆಯೋಜಿಸಿದ್ದವು. ಇದೇ ತಂಡವು ಮುಂದಿನ ತಿಂಗಳು 18ರಿಂದ 24ರವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ.