ಬೆಂಗಳೂರು: ವಿವಿಧ ಬಗೆಯ ಖಾದಿ ಉತ್ಪನ್ನಗಳು, ಸೂಕ್ಷ್ಮ ಕುಸುರಿಯ ಆಲಂಕಾರಿಕ ವಸ್ತುಗಳು, ಮಕ್ಕಳನ್ನು ಸೆಳೆಯುವ ಆಕರ್ಷಕ ಗೊಂಬೆಗಳು, ಮಹಿಳೆಯರನ್ನು ಸೆಳೆಯುತ್ತಿರುವ ಬಳೆ, ಓಲೆ, ಬ್ಯಾಗ್ಗಳು– ಇವು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಖಾದಿ ಉತ್ಸವದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳು.
ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿ ರುವ ‘ಖಾದಿ ಉತ್ಸವ–2014’ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ, ಮಾರಾಟ ಮೇಳವು ಖಾದಿ ಪ್ರಿಯರು, ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.
ಸಣ್ಣ ಕೈಗಾರಿಕೆ ಸಚಿವ ಪ್ರಕಾಶ್ ಬಿ.ಹುಕ್ಕೇರಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆಯಲ್ಲಿ ಪಾಲ್ಗೊಂಡು ಖಾದಿ ಉತ್ಪನ್ನ ಪ್ರೋತ್ಸಾಹಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ರೇಷ್ಮೆ ಖಾದಿಯ ಮೇಲೆ ಶೇ 25 ಮತ್ತು ಇತರೆ ಖಾದಿ ಉತ್ಪನ್ನಗಳ ಮೇಲೆ ಶೇ 35ರಷ್ಟು ರಿಯಾಯಿತಿ ಇದೆ. ಮೇಳವು ಫೆ.9ರವರೆಗೆ ನಡೆಯಲಿದೆ.