ನವದೆಹಲಿ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಹಾಗೂ ಎನ್ಡಿಎ ಸೋಲಿಸುವ ದಿಸೆಯಲ್ಲಿ ಪ್ರಾದೇಶಿಕ ಪಕ್ಷಗಳ ಸಹಕಾರದೊಂದಿಗೆ `ರಾಷ್ಟ್ರೀಯ ಪರ್ಯಾಯ' ರಚಿಸಲಾಗುವುದು ಎಂದು ಸಿಪಿಎಂ ತಿಳಿಸಿದೆ."
`ನವ ಉದಾರ ನೀತಿ' ಪ್ರತಿಪಾದಿಸುವ ಜಾತ್ಯತೀತ ಕಾಂಗ್ರೆಸ್ಗಾಗಲಿ, ಇಲ್ಲವೆ ಬಿಜೆಪಿಗಾಗಲಿ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ಸೇತರ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಗಳಿದ್ದು, ಅಗತ್ಯ ಬಿದ್ದಲ್ಲಿ ಇಂತಹ ಸರ್ಕಾರ ಅಸ್ತಿತ್ವಕ್ಕೆ ಬರುವಂತಾಗಲು ನಾವು ನಮ್ಮ ಪಾತ್ರವನ್ನು ನಿರ್ವಹಿಸುತ್ತೇವೆ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದರು.
`ಮುಂಬರುವ ಚುನಾವಣೆಯ ನಂತರ ಕಾಂಗ್ರೆಸ್ ಇಲ್ಲವೆ ಬಿಜೆಪಿ ಪಕ್ಷಗಳು ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಯುಪಿಎ ನೀತಿ ನಮಗೆ ಒಪ್ಪಿಗೆಯಾಗಿಲ್ಲವಾದ್ದರಿಂದ ಕಾಂಗ್ರೆಸ್ ಸೋಲಿಸಲು ಕರೆ ನೀಡುತ್ತಿದ್ದೇವೆ' ಎಂದರು.
ತೃತೀಯ ರಂಗದ ಕುರಿತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ `ಅತ್ಯುತ್ತಮ ಆರೋಗ್ಯಕರ ಆಯ್ಕೆ' ಎಂದು ಪ್ರತಿಕ್ರಿಯಿಸಿದ್ದು ಪರ್ಯಾಯ ವ್ಯವಸ್ಥೆಯ ಅನಿವಾರ್ಯತೆಯನ್ನು ಅವರು ಒತ್ತಿಹೇಳಿದ್ದಾರೆ ಎಂದರು.