ಮುಳಬಾಗಲು: ತಾಲ್ಲೂಕಿನ ದೂಲಪಲ್ಲಿಯಲ್ಲಿ ಸಂಕ್ರಾಂತಿ ಆಚರಣೆ ಅಂಗವಾಗಿ ಭಾನುವಾರ ನಡೆದ ರಾಸುಗಳ ಓಟದಲ್ಲಿ ಒಬ್ಬ ಮೃತಪಟ್ಟಿದ್ದು ಮೂವತ್ತೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತನನ್ನು ಆಂಧ್ರಪ್ರದೇಶದ ಶಾಂತಿಪುರ ಮಂಡಲ್ನ ಪೆದ್ದಬೊಮ್ಮನಪಲ್ಲಿ ಗ್ರಾಮದ ಸುಬ್ರಹ್ಮಣ್ಯಂ (32) ಎಂದು ಗುರುತಿಸಲಾಗಿದೆ.
ರಾಸುಗಳ ಓಟದ ಸಮಯದಲ್ಲಿ ಜಾನುವಾರು ಬೆದರಿಸಲು ಸುಬ್ರಹ್ಮಣ್ಯಂ ಇನ್ನಿತರರು ಮುಂದಾದಾಗ ಎತ್ತುಗಳ ತಿವಿತಕ್ಕೆ ಸಿಲುಕಿ ಗಾಯಗೊಂಡರು ಎನ್ನಲಾಗಿದೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅದಕ್ಕೆ ಸ್ಪಂದಿಸದೆ ಮೃತಪಟ್ಟರು.
ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಮೂರು ವರ್ಷದ ಹಿಂದೆ ಮುಳಬಾಗಲುವಿನಲ್ಲಿ ಡಿವೈಎಸ್ಪಿಯಾಗಿ ಕೆಲಸ ನಿರ್ವಹಿಸಿದವರು ಸಹ ಎತ್ತಿನ ಓಟ ನೋಡಲು ಬಂದು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.