ನವದೆಹಲಿ (ಪಿಟಿಐ): ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಕ್ರಮವಾಗಿ ಕೂಡಿಹಾಕಿದ್ದು ಈ ಕುರಿತು ವಿಚಾರಣೆ ನಡೆಸಬೇಕು ಎಂಬ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ ಸಮ್ರಿತೆ ಅವರು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿರುವ ಸುಪ್ರೀಂಕೋರ್ಟ್ ಸಮ್ರಿತೆ ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
`ಸಮ್ರಿತೆ ಮಾಡಿರುವ ಆರೋಪ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾಗಿದ್ದು ರಾಹುಲ್ ಗಾಂಧಿ ಅವರ ಘನತೆ ಗೌರವಕ್ಕೆ ಮಸಿ ಬಳಿಯುವ ದುರುದ್ದೇಶ ಇದರಲ್ಲಿ ಅಡಗಿದೆ~ ಎಂದು ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಹಾಗೂ ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾದ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದ್ದು, ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಸಮ್ರಿತೆ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿ ರೂ 50 ಲಕ್ಷ ಜುಲ್ಮಾನೆ ವಿಧಿಸಿತ್ತು. ಅಲ್ಲದೆ ಅವರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆಯೂ ಆದೇಶಿಸಿತ್ತು. ಹೀಗಾಗಿ ಸಮ್ರಿತೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
`ಮಾಹಿತಿ ತಿಳಿಯುವ ತಮ್ಮ ಹಕ್ಕನ್ನು ಅಲಹಾಬಾದ್ ಹೈಕೋರ್ಟ್ ಕಸಿದುಕೊಂಡಿದ್ದು ಅರ್ಜಿಯಲ್ಲಿ ಹೇಳಲಾದ ಹುಡುಗಿಯ ಬದಲು ಬೇರೆ ಹುಡುಗಿಯನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಮೇಲಾಗಿ ಈ ಸಂಬಂಧ ಸಿಬಿಐ ಕೈಗೊಂಡಿರುವ ತನಿಖೆಯೂ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ~ ಎಂದು ಸಮ್ರಿತೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ವಾದ ಮಾಡಿದ್ದರು.