ನವದೆಹಲಿ (ಪಿಟಿಐ/ಐಎಎನ್ಎಸ್): ರಾಹುಲ್ ಗಾಂಧಿ ವಿರುದ್ಧದ ಅಪಹರಣ ಪ್ರಕರಣವು ಆಧಾರರಹಿತ ಎಂದು ಹೇಳಿದ ಸುಪ್ರೀಂಕೋರ್ಟ್ ಪ್ರಕರಣ ದಾಖಲಿಸಿದ್ದ ಮಾಜಿ ಶಾಸಕ ಕಿಶೋರ್ ಸ್ಮೃತಿ ಅವರಿಗೆ ಗುರುವಾರ 5 ಲಕ್ಷ ರೂ ದಂಡ ವಿಧಿಸಿದೆ.
ರಾಹುಲ್ ಅವರ ಮೇಲೆ ಮಾಡಲಾಗಿರುವ ಅತ್ಯಾಚಾರ ಹಾಗೂ ಅಪಹರಣದ ಆರೋಪವು ಸಂಪೂರ್ಣವಾಗಿ ಆಧಾರರಹಿತ ಎಂದು ಹೇಳಿರುವ ಬಿ.ಎಸ್. ಚೌಹಾಣ್ ಮತ್ತು ಸ್ವತಂತ್ರ ಕುಮಾರ್ ಅವರಿದ್ದ ನ್ಯಾಯಪೀಠ ಕಿಶೋರ್ ಸ್ಮೃತಿ ಅವರು ತಪ್ಪು ಹೇಳಿಕೆ ನೀಡುವ ಮೂಲಕ ನ್ಯಾಯಾಂಗದ ಸಹಜಕ್ರಿಯೆಯನ್ನು ನಿಂದಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ಈ ಹಿಂದೆ ಅಲಹಾಬಾದ್ ಹೈಕೋರ್ಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶೋರ್ ಅವರಿಗೆ 50 ಲಕ್ಷ ರೂ.ಗಳ ದಂಡ ವಿಧಿಸಿ ಕಿಶೋರ್ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿತು.
ಈ ಆದೇಶವನ್ನು ಕಿಶೋರ್ ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದಂಡವನ್ನು 50 ಲಕ್ಷದಿಂದ 5 ಲಕ್ಷಕ್ಕೆ ಇಳಿಸಿತು. ಆದರೆ ಸಿಬಿಐ ತನಿಖೆಗೆ ಯಾವುದೇ ತಡೆ ನೀಡದೆ ಕಿಶೋರ್ ಅವರು ಇಂತಹ ತಪ್ಪು ಅರ್ಜಿ ಸಲ್ಲಿಸಲು ಕಾರಣರಾದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿ 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಿಬಿಐ ಗೆ ಸೂಚಿಸಿತು.