ಅಮೇಠಿ (ಪಿಟಿಐ): ಕಾಂಗ್ರೆಸ್ ಕಾರ್ಯಕರ್ತರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಮೇಠಿ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಮಾರ್ ವಿಶ್ವಾಸ್ ಆರೋಪಿಸಿದ್ದು, ಪ್ರಿಯಾಂಕಾ ವಾಧ್ರಾ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಲವು ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
‘ರಾಹುಲ್, ಪ್ರಿಯಾಂಕಾ, ಚಂದ್ರಕಾಂತ್ ದುಬೇ, ವಿನೋದ್ ಮಿಶ್ರಾ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ನಮಗೆ ಮನವಿ ಬಂದಿದ್ದು, ಅರ್ಜಿಯನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ’ ಪೊಲೀಸ್ ವರಿಷ್ಠಾಧಿಕಾರಿ ಹೀರಾಲಾಲ್ ಹೇಳಿದ್ದಾರೆ.
ಏ. 15ರಂದು ಪ್ರಿಯಾಂಕಾ ವಾಧ್ರಾ ಅವರು ಕ್ಷೇತ್ರದಲ್ಲಿ ಪ್ರವಾಸ ಮಾಡಿದಾಗ ಚಿತ್ರೀಕರಿಸಲಾಗಿದ್ದ ವಿಡಿಯೊ ಸೋರಿಕೆಯಾಗಿದ್ದು, ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತ ವಿನೋದ್ ಮಿಶ್ರಾ ಎಂಬುವವರು, ‘ವಿಶ್ವಾಸ್, ರಾಹುಲ್ ಗಾಂಧಿ ವಿರುದ್ಧ ಮಾತನಾಡುತ್ತಿದ್ದು, ನಾನು ಅವರಿಗೆ ಗುಂಡಿಕ್ಕುತ್ತೇನೆ’ ಎಂದು ಹೇಳಿದ್ದಾರೆ ಎಂದು ವಿಶ್ವಾಸ್ ಆರೋಪಿಸಿದ್ದಾರೆ.