ಬೆಳಗಾವಿ: `ಬಿಜೆಪಿಯನ್ನು ಟೀಕಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನೈತಿಕ ಹಕ್ಕು ಇಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.`ರಾಜ್ಯದ ಸ್ಥಿತಿಗತಿ ಗೊತ್ತಿಲ್ಲದವರು ಬರೆದು ಕೊಡುವ ಭಾಷಣವನ್ನು ಓದುವ ಅವರು, ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದನ್ನು ಹಾಗೂ ಬಿಜೆಪಿಯವರು ಲೂಟಿಕೋರರು ಎಂದು ಹೇಳಿರುವುದನ್ನು ಖಂಡಿಸುತ್ತೇವೆ' ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ನೈತಿಕತೆ ಇಲ್ಲ. ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2ಜಿ ತರಂಗಾಂತರ ಸೇರಿದಂತೆ ಹಲವಾರು ಹಗರಣಗಳಲ್ಲಿ ಭಾಗಿಯಾಗಿದೆ. ರಾಹುಲ್ ನೀಡಿರುವ ಹೇಳಿಕೆಯು ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿಸಿದಂತಾಗಿದೆ' ಎಂದು ವ್ಯಂಗ್ಯವಾಡಿದರು.